ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಆಪ್ತ ಛೋಟಾ ಶಕೀಲ್ ಪರ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದ ಇಬ್ಬರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮುಂಬೈಯಲ್ಲಿ ಬಂಧಿಸಿದೆ.
ಬಂಧಿತರನ್ನು ಆರಿಫ್ ಅಬೂಬಕರ್ ಶೇಖ್ (59) ಹಾಗೂ ಶಬ್ಬೀರ್ ಅಬೂಬಕರ್ ಶೇಖ್ (51) ಎಂದು ಗುರುತಿಸಲಾಗಿದೆ. ಬಂಧಿತರನ್ನು ಇಂದು (ಶುಕ್ರವಾರ) ಎನ್ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತನಿಖಾ ದಳ ತಿಳಿಸಿದೆ.
ಇಬ್ಬರೂ ಮುಂಬೈಯ ಪಶ್ಚಿಮ ಉಪನಗರ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ದಾವೂದ್ ಸಹಚರರ ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುತ್ತಿದ್ದರು ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.