ಮುಂಬಯಿ: ದಕ್ಷಿಣ ಆಫ್ರಿಕ ಸೇರಿ ಅನೇಕ ರಾಷ್ಟ್ರಗಳಲ್ಲಿ ಕೊರೊನಾದ ಒಮಿಕ್ರಾನ್ ರೂಪಾಂತರಿ ಹೆಚ್ಚಲಾ ರಂಭಿಸಿರುವ ಬೆನ್ನಲ್ಲೇ ಭಾರತದಲ್ಲೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚಿಸಿದೆ.
ಆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರವು ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಕಠಿಣ ನಿಯಮ ಪಾಲನೆಗೆ ಮುಂದಾಗಿದೆ.
ದೇಶೀಯ ಪ್ರಯಾಣಿಕರು ಸಂಪೂರ್ಣ ಲಸಿಕೆ ಪಡೆದವರಾಗಿರಬೇಕು ಅಥವಾ 72 ಗಂಟೆಗಳೊಳಗೆ ಮಾಡಿಸಿರುವ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು.
ರಾಜ್ಯಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು ಕೇಂದ್ರ ಸರಕಾರ ಸೂಚಿಸಿರುವ ಎಲ್ಲ ನಿಯಮಗಳಿಗೆ ಬದ್ಧರಾಗಿರಬೇಕು.
ಕಾರು, ಬಸ್, ಕಚೇರಿ ಸೇರಿ ಯಾವುದೇ ಪ್ರದೇಶದಲ್ಲಿಯೂ ಕೊರೊನಾ ನಿಯಮ ಉಲ್ಲಂಘನೆ ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದಲ್ಲಿ, 500 ರೂ.ನಿಂದ 50,000 ರೂ.ವರೆಗಿನ ದಂಡ ವಿಧಿಸಲಾಗುವುದು. ಹಾಗೆಯೇ ಸಾರ್ವಜನಿಕ ಸಾರಿಗೆಗಳನ್ನು ಬಳಸುವುದಕ್ಕೆ ಸಂಪೂರ್ಣ ಲಸಿಕೆ ಪಡೆದವರಿಗೆ ಮಾತ್ರ ಅವಕಾಶ.
ಯಾವುದೇ ಕಾರ್ಯಕ್ರಮ, ಸಿನೆಮಾ ಮಂದಿರಗಳಲ್ಲಿ ಶೇ.50 ಆಸನ ಭರ್ತಿ ಮಾಡುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಸಂಪೂರ್ಣ ಲಸಿಕೆ ಪಡೆದಿರಬೇಕು ಎಂದೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.