ಭೂಪಾಲ್ : ಮಧ್ಯ ಪ್ರದೇಶದ ಈ ಬಾಲಕನ ವಯಸ್ಸು ಕೇವಲ 12 ಆದರೆ ಈತ ನಿತ್ಯ ಸೇವಿಸುತಿದ್ದುದು ಬರೋಬ್ಬರಿ 40 ಚಪಾತಿ. ದಿನವೂ ಇಷ್ಟೊಂದು ಚಪಾತಿ ತಿನ್ನುತ್ತಾ ಬಂದಿದ್ದ ಈ ಬಾಲಕ ಈಗ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ.
ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಖೋಡ್ ಗ್ರಾಮದ ನಿವಾಸಿ ಸಂದೀಪ್ ನಿಗೆ ಅಗಾಧ ಹಸಿವು. ಇದಕ್ಕೆ ಏನು ಕಾರಣ ಎಂದು ಪಾಲಕರಿಗೂ ಗೊತ್ತಾಗಿಲ್ಲ ಆದರೆ ಎಷ್ಟು ಕೊಟ್ಟರೂ ಚಪಾತಿ ಈತನಿಗೆ ಸಾಲುತ್ತಿರಲಿಲ್ಲ. ಆದ್ದರಿಂದ ಅವನಿಗೆ ಅಗತ್ಯ ಇರುವಷ್ಟು ಚಪಾತಿ ನೀಡುತ್ತಿದ್ದರು ಪಾಲಕರು.
ಆದರೆ ಇದೇ ಆತನಿಗೆ ಮುಳುವಾಗಿದೆ. ಕೆಲ ದಿನಗಳ ಹಿಂದೆ ಚಪಾತಿ ತಿನ್ನುತ್ತಿದ್ದಂತೆಯೇ ತಲೆ ತಿರುಗಿ ಬಿದ್ದಿದ್ದಾನೆ ಬಾಲಕ. ಇವನ ತಂದೆ ಬನ್ವಾರಿ ಆದಿವಾಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈತನ ಬಗ್ಗೆ ಕೇಳಿದ ವೈದ್ಯರಿಗೆ ಶಾಕ್ ಆಗಿದ್ದು, ಇಷ್ಟೊಂದು ಚಪಾತಿ ತಿನ್ನುವುದು ಏಕೆ ಎಂದು ತಮಗೂ ಅಚ್ಚರಿಯಾಗಿದೆ ಎಂದಿದ್ದಾರೆ. ನಂತರ ಬಾಲಕನ ಸಕ್ಕರೆ ಅಂಶ ಪರಿಶೀಲಿಸಿದಾಗ ಅದು 1200 ಎಂಜಿ ತಲುಪಿತ್ತು. ಸಂದೀಪ್ಗೆ ಅತಿಯಾದ ತಲೆನೋವು ಇತ್ತು ಎಂದು ಪಾಲಕರು ವೈದ್ಯರಿಗೆ ಹೇಳಿದ್ದರು. ಬಾಲಕ ಪ್ರಜ್ಞೆ ಕಳೆದುಕೊಂಡಿದ್ದ, ಆದರೆ ಉಸಿರಾಡುತ್ತಿದ್ದ. ಆದರೆ ಹೃದಯ ಸೇರಿದಂತೆ ಸಂದೀಪ್ ದೇಹದ ಬಹುತೇಕ ಅಂಗಗಳು ಕೆಲಸ ಮಾಡೋದನ್ನೇ ನಿಲ್ಲಿಸಿದ್ದವು. ಪರೀಕ್ಷೆ ಮಾಡಿದಾಗ ಆತನ ತಲೆಯಲ್ಲಿ ಕೀವು ತುಂಬಿಕೊಂಡಿರುವುದು ಕಂಡುಬಂತು.
ಕೂಡಲೇ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಬಾಲಕನ ತಲೆಯಿಂದ 720 ಮಿ.ಲೀ ಕೀವನ್ನು ತೆಗೆದಿದ್ದಾರೆ. ಕೀವು ತುಂಬಿದ್ದರಿಂದ ಆತ ಪ್ರಜ್ಞೆ ಕಳೆದುಕೊಂಡಿದ್ದು ಮಾತ್ರವಲ್ಲದೇ ದೃಷ್ಟಿಯನ್ನೂ ಕಳೆದುಕೊಂಡಿದ್ದ. ಈತನ ದೇಹದಲ್ಲಿ ಸಕ್ಕರೆ ಅಂಶವನ್ನು ಹತೋಟಿಗೆ ತರುವ ಸಲುವಾಗಿ ವೈದ್ಯರು ದಿನಕ್ಕೆ 6 ಯುನಿಟ್ ಇನ್ಸುಲಿನ್ ನೀಡುತ್ತಿದ್ದಾರೆ. ಸದ್ಯ ಕಣ್ಣುಗಳು ಸ್ವಲ್ಪ ಸ್ವಲ್ಪ ಕಾಣಲು ಶುರುವಾಗಿದೆ, ಚಿಕಿತ್ಸೆ ಮುಂದುವರೆದಿದೆ. ಅತಿಯಾದ ಚಪಾತಿ ಸೇವನೆಯಿಂದ ಸಕ್ಕರೆ ಪ್ರಮಾಣ ಹೆಚ್ಚಿ ಹೀಗೆ ಆಗಿದೆ ಎಂದಿದ್ದಾರೆ ವೈದ್ಯರು. ಗೋಧಿಯ ಸೇವನೆ ಕಡಿಮೆ ಮಅಡಿ ಎಂದು ಆಹಾರ ತಜ್ಞರು ಹೇಳುವುದು ಇದಕ್ಕಾಗಿಯೇ.