ಕೇರಳ: ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸನ್ ಅವರನ್ನು ಹತ್ಯೆಗೈದ ಆರೋಪದ ಮೇಲೆ 15 ಮಂದಿ ಪಿಎಫ್ಐ ಸದಸ್ಯರಿಗೆ ಕೇರಳ ನ್ಯಾಯಾಲಯ ಇಂದು(ಜ.30) ಮರಣದಂಡನೆ ಶಿಕ್ಷೆ ವಿಧಿಸಿದೆ.
2021 ರ ಡಿಸೆಂಬರ್ನಲ್ಲಿ ಅಲಪ್ಪುಳ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಒಬಿಸಿ ವಿಭಾಗದ ನಾಯಕ ರಂಜಿತ್ ಶ್ರೀನಿವಾಸನ್ ಅವರ ಹತ್ಯೆಗೆ ಸಂಬಂಧಿಸಿದಂತೆ ಈಗ ನಿಷೇಧಿತ ಇಸ್ಲಾಂ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ದೊಂದಿಗೆ ಸಂಬಂಧ ಹೊಂದಿರುವ 15 ಮಂದಿಗೆ ಕೇರಳ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಿ ಶ್ರೀದೇವಿ ಅವರು ಈ ಶಿಕ್ಷೆ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ನೀಡಬೇಕೆಂದು ಕೋರಿತ್ತು. ವ್ಯಕ್ತಿಯನ್ನು ಮಗು, ಹೆಂಡತಿ ಮುಂದೆಯೇ ಹತ್ಯೆಗೈಯಲಾಗಿತ್ತು.
ಕೇರಳದಲ್ಲಿ ಇದೇ ಮೊದಲ ಬಾರಿಗೆ ಒಂದೇ ಪ್ರಕರಣದಲ್ಲಿ ಇಷ್ಟು ಮಂದಿಗೆ ಮರಣದಂಡನೆ ವಿಧಿಸಲಾಗಿದೆ. ಜನವರಿ 20 ರಂದು, ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಈ ಪ್ರಕರಣದಲ್ಲಿ ಪಿಎಫ್ಐ-ಎಸ್ಡಿಪಿಐಗೆ ನಂಟು ಹೊಂದಿರುವ 15 ಜನರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು.ನ್ಯಾಯಾಲಯ ಇಂದು ಶಿಕ್ಷೆಯನ್ನು ಪ್ರಕಟಿಸಿದೆ.
2021 ರ ಡಿಸೆಂಬರ್ 19ರಂದು ಬಿಜೆಪಿಯ ಒಬಿಸಿ ಮೋರ್ಚಾ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರನ್ನು ಭಾನುವಾರ ಬೆಳಿಗ್ಗೆ ಅವರ ಮನೆಯ ಹೊರಗೆ ಕೊಂದು ಹಾಕಲಾಗಿದೆ. ರಂಜಿತ್ ಶ್ರೀನಿವಾಸನ್ ಅವರು ಬೆಳಗಿನ ವಾಯುವಿಹಾರಕ್ಕೆಂದು ಹೊರಗೆ ಬಂದಿದ್ದರು. ಆಗ ಎಂಟು ಜನರಿಂದ ಹಂತಕರ ಗುಂಪು ಅವರ ಮೇಲೆ ಮುಗಿಬಿದ್ದು, ಮಾರಕಾಸ್ತ್ರಗಳಿಂದ ಚುಚ್ಚಿ ಪರಾರಿಯಾಗಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.