ತಿರುವನಂತಪುರಂ: ದೇಶದ ಪವಿತ್ರ ಪುಣ್ಯಕ್ಷೇತ್ರ ಶಬರಿಮಲೆಯಲ್ಲಿ ದೇವಾಲಯದ ಬಾಗಿಲುಗಳು ಇಂದು ತೆರಯಲಿವೆ. ಮಂಡಲ-ಮಕರವಿಳಕ್ಕು ಯಾತ್ರೆ ಆರಂಭದ ಹಿನ್ನೆಲೆಯಲ್ಲಿ ಗುರುವಾರ ಸಂಜೆ 5 ಗಂಟೆಗೆ ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲದ ಬಾಗಿಲುಗಳು ತೆರೆಯಲಿವೆ.
ಇನ್ನು ಇದರ ಜೊತೆಗೆ ತಿರುವಾಂಕೂರು ದೇವಸ್ವಂ ಮಂಡಳಿಯು ನಿಲಕ್ಕಲ್ನಲ್ಲಿ ಪಾರ್ಕಿಂಗ್ಗಾಗಿ ಫಾಸ್ಟ್ಟ್ಯಾಗ್ ವ್ಯವಸ್ಥೆಯನ್ನು ಜಾರಿಗೊಳಿಸಿರುವುದರಿಂದ ಶಬರಿಮಲೆ ಕಡೆಗೆ ಹೋಗುವ ಎಲ್ಲಾ ವಾಹನಗಳು ಫಾಸ್ಟ್ಟ್ಯಾಗ್ ಹೊಂದಿರಬೇಕು ಎಂದು ಡಿಜಿಪಿ ಶೇಖ್ ದರ್ವೇಶ್ ಸಾಹೇಬ್ ಬುಧವಾರ(ನ.15) ಹೇಳಿದ್ದಾರೆ.
ಶಬರಿಮಲೆಗೆ ಹೋಗುವ ಯಾವುದೇ ವಾಹನಗಳನ್ನು ಅಲಂಕರಿಸಬಾರದು ಎಂದು ಅವರು ಸಲಹೆ ನೀಡಿದರು. ಸುರಕ್ಷಿತ ಶಬರಿಮಲೆ ಮಂಡಲಂ-ಮಕರವಿಳಕ್ಕು ಯಾತ್ರೆಯನ್ನು ಖಚಿತಪಡಿಸಿಕೊಳ್ಳಲು ಮಾಡಲಾದ ಎಲ್ಲಾ ವ್ಯವಸ್ಥೆಗಳನ್ನು ಡಿಜಿಪಿ ಪರಿಶೀಲಿಸಿದ್ದಾರೆ.