ಕಾಸರಗೋಡು : ಕೇರಳದಲ್ಲಿ ಇಂದಿನಿಂದ ಆರಂಭವಾಗಬೇಕಿದ್ದ ಖಾಸಗಿ ಬಸ್ ಮುಷ್ಕರವನ್ನು ಹಿಂಪಡೆಯಲಾಗಿದೆ. ರಾಜ್ಯ ಸಾರಿಗೆ ಖಾತೆ ಸಚಿವ ಆಂಟನಿ ರಾಜು ಹಾಗೂ ಬಸ್ ಸಂಘಟನೆಗಳ ಪ್ರತಿನಿಧಿಗಳ ನಡುವೆ ಸೋಮವಾರ ರಾತ್ರಿ ತಿರುವನಂತಪುರದಲ್ಲಿ ನಡೆದ ಕೊನೆಯ ಸುತ್ತಿನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಆದರೆ ನ.18 ರ ಮೊದಲು ಖಾಸಗಿ ಬಸ್ ಮಾಲೀಕರ ಅಗತ್ಯತೆಗಳ ಕುರಿತು ನಿರ್ಧಾರ ಕೈಗೊಂಡು ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಬಸ್ ದರ ಹೆಚ್ಚಳಕ್ಕೆ ಮಾಲೀಕರು ಒತ್ತಾಯಿಸಿದ್ದಾರೆ ಎಂದು ಸಚಿವರು ಹೇಳಿದರು.
ಕೆಲವು ಕಾರ್ಯಯೋಜನೆಗಳ ಅಗತ್ಯವಿದೆ ಎಂದು ಚರ್ಚೆಯ ಸಮಯದಲ್ಲಿ ಸಚಿವರು ಅರ್ಥಮಾಡಿಕೊಂಡರು ಎಂದು ಬಸ್ ಸಂಘಟನೆಯ ಪ್ರತಿನಿಧಿಗಳು ತಿಳಿಸಿದರು. ಸರಕಾರದ ನಿಲುವು ಅನುಕೂಲಕರವಾಗಿರುವುದನ್ನು ಮನಗಂಡು ಮುಷ್ಕರ ಮುಂದೂಡುವ ತೀರ್ಮಾನ ಕೈಗೊಳ್ಳಲಾಗಿದೆ.
ಸರಕಾರದ ಕಾರ್ಯವೈಖರಿಯಲ್ಲಿ ಭರವಸೆ ಮೂಡಿದೆ ಎಂದು ಸಂಘಟನೆಯ ಮುಖಂಡರು ವಿವರಿಸಿದರು. ವಿದ್ಯಾರ್ಥಿಗಳು ಸೇರಿದಂತೆ ಬಸ್ ಪ್ರಯಾಣ ದರ ಹೆಚ್ಚಿಸಬೇಕು ಹಾಗೂ ಡೀಸೆಲ್ ಗೆ ಸಬ್ಸಿಡಿ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರದಿಂದ ಖಾಸಗಿ ಬಸ್ ಗಳು ಮುಷ್ಕರ ನಡೆಸಲು ನಿರ್ಧಾರ ಕೈಗೊಳ್ಳಲಾಗಿತ್ತು.