ತಿರುವನಂತಪುರಂ: 36 ವರ್ಷದ ಯುವಕನೋರ್ವ ಸೆಲ್ಫಿ ತೆಗೆಯುವಾಗ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಕೇರಳದ ಅಳಿಮಳ ಬೀಚಿನಲ್ಲಿ ನಡೆದಿದೆ. ತಿರುವಲ್ಲಂ ನಗರ ನಿವಾಸಿ ಜಯನ್ ಮೃತ ಯುವಕ.
ಜಯನ್ ಸ್ನೇಹಿತರೊಡನೆ ಬೀಚಿಗೆ ಬಂದಿದ್ದ. ಆತನ ಸ್ನೇಹಿತರು ಬೀಚಿನಲ್ಲಿ ಆಟವಾಡುತ್ತಿರಬೇಕಾರೆ ಈತ ಒಬ್ಬನೇ ಸೆಲ್ಫಿ ತೆಗೆದುಕೊಳ್ಳಲು ಕಲ್ಲುಬಂಡೆಗಳ ರಾಶಿಯಿದ್ದಲ್ಲಿಗೆ ಹೋಗಿದ್ದ. ಅಲೆಗಳ ಹೊಡೆತಕ್ಕೆ ಸಿಕ್ಕು ಕಡಿದಾದ ಕಲ್ಲುಬಂಡೆ ಜಾರುತ್ತಿದ್ದವು.
ಈ ಹಿಂದೆ ಕಲ್ಲುಬಂಡೆಗಳ ಮೇಲೆ ಕಾಲು ಜಾರಿ ಹಲವು ಪ್ರವಾಸಿಗರು ಮೃತಪಟ್ಟಿದ್ದರು. ಹೀಗಾಗಿ ಆ ಜಾಗಕ್ಕೆ ಹೋಗಬೇಡಿ ಎಂಡು ಎಚ್ಚರಿಕೆ ಸಂದೇಶ ಬರೆದ ಸೂಚನಾಫಲಕವೊಂದನ್ನು ಅಲ್ಲಿ ನೆಡಲಾಗಿತ್ತು. ಜಯನ್ ಎಚ್ಚರಿಕೆ ಕಡೆಗಣಿಸಿ ಬಂಡೆ ಮೇಲೆ ಹೋಗಿದ್ದ.
ಬಂಡೆ ತುದಿಗೆ ಹೋಗಿ ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ದೊಡ್ಡ ಅಲೆಯೊಂದು ಅಪ್ಪಳಿಸಿತ್ತು. ಇದರಿಂದಾಗಿ ಜಯನ್ ಆಯತಪ್ಪಿದ್ದ. ಈ ಸಂದರ್ಭದಲ್ಲಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದ. ಸಮುದ್ರದಲೆಗಳು ತೀವ್ರವಾಗಿದ್ದರಿಂದ ಆತ ಬಿದ್ದಿದ್ದ ಸ್ಥಳ ತಲುಪಲು ಆಗಲಿಲ್ಲ ಎಂದು ಸ್ನೇಹಿತರು ತಿಳಿಸಿದ್ದಾರೆ.