ತಿರುವನಂತಪುರಂ: ದೇಶಾದ್ಯಂತ ಕೊರೋನ ಸೋಂಕು ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡು ಬಂದಿದ್ದರೆ ಕೇರಳದಲ್ಲಿ ಮಾತ್ರ ಸೋಂಕಿನ ಪ್ರಮಾಣ ಭಾರೀ ಏರಿಕೆ ಕಾಣಲಾರಂಭಿಸಿದೆ. ಒಂದೇ ದಿನದಲ್ಲಿ ರಾಜ್ಯದಲ್ಲಿ 22 ಸಾವಿರಕ್ಕೂ ಅಧಿಕ ಪ್ರಕರಣ ದೃಢವಾಗಿದೆ. ಕಳೆದ 50 ದಿನಗಳಲ್ಲಿ 20 ಸಾವಿರಕ್ಕೂ ಅಧಿಕ ಏಕದಿನ ಏರಿಕೆ ದಾಖಲು ಮಾಡಿದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ.
ಮಂಗಳವಾರ ಪತ್ತೆಯಾದ 22,129 ಪ್ರಕರಣಗಳೊಂದಿಗೆ ರಾಜ್ಯದ ಒಟ್ಟಾರೆ ಪ್ರಕರಣಗಳ ಸಂಖ್ಯೆ 33 ಲಕ್ಷ ದಾಟಿದೆ. ರಾಜ್ಯದ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 12.35ರಷ್ಟಿದೆ. 1.45 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯಿವೆ. ಒಂದೇ ದಿನದಲ್ಲಿ 156 ಸೋಂಕಿತರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 85 ಸಾವಿರ ಹಾಗೂ ಮೂರನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 22 ಸಾವಿರ ಸಕ್ರಿಯ ಪ್ರಕರಣಗಳು ಬಾಕಿಯಿವೆ.
ಕೇರಳದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದರೂ ಅದನ್ನು ಪರಿಗಣಿಸದ ರಾಜ್ಯ ಸರ್ಕಾರ, ಬಕ್ರೀದ್ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ಲಾಕ್ಡೌನ್ ಸಡಿಲಿಕೆ ಮಾಡಿತ್ತು. ಈ ರೀತಿ ಮಾಡುವುದರಿಂದ ಕರೊನಾ ಹಿಡಿತ ತಪ್ಪಬಹುದು ಎಂದು ಸುಪ್ರೀಂ ಕೋರ್ಟ್ ಹಾಗೂ ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ಎಚ್ಚರಿಸಿತ್ತು. ಲಾಕ್ಡೌನ್ ಸಡಿಲಿಕೆಯಿಂದಾಗಿ ಸೋಂಕು ಇನ್ನಷ್ಟು ಹೆಚ್ಚಿರುವ ಸಾಧ್ಯತೆಯಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಸೋಂಕಿತರು ವರದಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.ಕಳೆದವಾರ ಕೇರಳದಲ್ಲಿ ಈದ್-ಉಲ್ಗಾಗಿ ಮೂರುದಿನಗಳ ಕೊವಿಡ್ 19 ನಿಯಂತ್ರಣಾ ನಿಯಮಗಳಲ್ಲಿ ನಿರ್ಬಂಧವನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿತ್ತು. ಹೀಗೆ ಕೇರಳದಲ್ಲಿ ಲಾಕ್ಡೌನ್ನಲ್ಲಿ ನಿರ್ಬಂಧ ಸಡಿಲಿಸಿದ್ದಕ್ಕೆ ಸುಪ್ರೀಂಕೋರ್ಟ್ ತೀಕ್ಷ್ನವಾಗಿ ಪ್ರತಿಕ್ರಿಯೆ ನೀಡಿತ್ತು. ಹಾಗಂತ ಕೇರಳದ ಲಾಕ್ಡೌನ್ ಸಡಿಲಿಕೆ ಅಧಿಸೂಚನೆಯನ್ನೇನೂ ರದ್ದುಗೊಳಿಸಿರಲಿಲ್ಲ.
ಕೇರಳದಲ್ಲಿ ಕೊವಿಡ್ 19 ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಬೆನ್ನಲ್ಲೇ ಜು.31 ಮತ್ತು ಆಗಸ್ಟ್ 1 (ಶನಿವಾರ ಹಾಗೂ ಭಾನುವಾರ) ಸಂಪೂರ್ಣ ಲಾಕ್ಡೌನ್ ಹೇರಲು ಅಲ್ಲಿನ ಸರ್ಕಾರ ನಿರ್ಧಾರ ಮಾಡಿದೆ.