ಕೇರಳ: ಕೇರಳದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ, ಇಡುಕ್ಕಿ ಜಲಾಶಯದಲ್ಲಿನ ನೀರು ಅಲರ್ಟ್ -ಎಚ್ಚರಿಕೆಯ ಮಟ್ಟಕ್ಕೆ ಸಮೀಪಿಸುತ್ತಿದೆ.
ಏಷ್ಯಾದ ಅತಿ ಎತ್ತರದ ಕಮಾನು ಅಣೆಕಟ್ಟುಗಳಲ್ಲಿ ಒಂದಾದ ಇಡುಕ್ಕಿ ಜಲಾಶಯದಲ್ಲಿ ನೀರಿನ ಮಟ್ಟವು ಸೋಮವಾರ 2,396.96 ಅಡಿಗಳಿಗೆ ಏರಿಕೆಯಾಗಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಇಡುಕ್ಕಿ ಅಣೆಕಟ್ಟಿನ ಪೂರ್ಣ ಜಲಾಶಯದ ಮಟ್ಟ 2,403 ಅಡಿಗಳು.
ಶೋಲಯಾರ್, ಪಂಬಾ, ಕಕ್ಕಿ ಮತ್ತು ಇಡಮಲಯಾರ್ ಸೇರಿದಂತೆ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ, ರಾಜ್ಯ ಸರ್ಕಾರವು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಸಭೆ ಕರೆದು ಪರಿಸ್ಥಿತಿಯನ್ನು ಅವಲೋಕಿಸಲಿದೆ.
ಪಂಬಾ ಅಣೆಕಟ್ಟಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಇಂದು ಮಧ್ಯಾಹ್ನದ ಮೊದಲು ಕಕ್ಕಿ ಅಣೆಕಟ್ಟು ತೆರೆಯಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಚೆಂಕಲ್, ಪೂಜಿಕಾಡ್ ಮುಡಿಯೂರುಕೋಣಂ ಮತ್ತು ಕುಂದಾಂಬಾಳ, ಪಂದಳಂ ಸಮೀಪದ ತಗ್ಗು ಪ್ರದೇಶಗಳು, ಅಚಂಕೋವಿಲ್ ನದಿಯ ತೀರದಲ್ಲಿ ಪ್ರವಾಹ ಉಂಟಾಗಿದೆ.
ಅಚಂಕೋವಿಲ್ನಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ, ಅರನ್ಮುಲಾ, ಕಿಡಂಗನೂರು ಮತ್ತು ಓಮಲ್ಲೂರು ಪ್ರದೇಶಗಳ ಬಳಿಯಿರುವ ದಂಡೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ಪತ್ತನಂತಿಟ್ಟ ಜಿಲ್ಲೆಯಲ್ಲಿ ತೆರೆಯಲಾದ ವಿವಿಧ ಪರಿಹಾರ ಶಿಬಿರಗಳಿಗೆ ಜನರನ್ನು ಸ್ಥಳಾಂತರಿಸಲಾಗಿದೆ.
ಏತನ್ಮಧ್ಯೆ, ರಾಜ್ಯ ಸರ್ಕಾರ ಎಡಿಜಿಪಿ ವಿಜಯ್ ಸಖಾರೆ ಅವರನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಸಂಯೋಜಿಸಲು ನೋಡಲ್ ಅಧಿಕಾರಿಯಾಗಿ ನೇಮಿಸಿದೆ.ತ್ರಿಶೂರ್ ಜಿಲ್ಲಾಧಿಕಾರಿಯಾದ ಹರಿತಾ ವಿ ಕುಮಾರ್ ಅವರು ಶೋಲಾಯಾರ್ ಅಣೆಕಟ್ಟು ಶೀಘ್ರದಲ್ಲಿ ತೆರೆಯಬಹುದಾದ್ದರಿಂದ ನೀರಿನ ಮಟ್ಟ ಏರಿಕೆಯಾಗಬಹುದು ಎಂದು ಚಾಲಕುಡಿ ನದಿಯ ದಡದಲ್ಲಿ ವಾಸಿಸುವ ಸಾರ್ವಜನಿಕರನ್ನು ಜಾಗರೂಕತೆಯಿಂದ ಇರುವಂತೆ ಕೇಳಿಕೊಂಡಿದ್ದಾರೆ.