News Karnataka Kannada
Thursday, May 02 2024
ಕರ್ನಾಟಕ

ಬಿಜೆಪಿಯ ಅಧಿಕಾರ ಕೇಂದ್ರ ಯಡಿಯೂರಪ್ಪ ಮನೆ ಮುಂದೆ ಸಚಿವಾಕಾಂಕ್ಷಿಗಳ ಸಾಲು

Cm Yeddyurappa 6 7 21
Photo Credit :

 

ಬೆಂಗಳೂರು : ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಕೂಡ ಬಿಜೆಪಿಯ ಅಧಿಕಾರ ಕೇಂದ್ರವಾಗಿಯೇ ಇದ್ದಾರೆ. ಯಾವಾಗ ಹೈಕಮಾಂಡ್‌ ಯಡಿಯೂರಪ್ಪ ಅವರ ಸೂಚನೆಯ ಮೇರೆಗೆ ಬೊಮ್ಮಾಯಿ ಅವರನ್ನು ಮುಖ್ಯ ಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿತು ಎಂಬ ವಿಚಾರ ಹೊರಬಿದ್ದ ನಂತರ ಯಡಿಯೂರಪ್ಪ ಸಚಿವಾಕಾಂಕ್ಷಿ ಶಾಸಕರಿಗೆ ಪ್ರಿಯವಾಗಿ ಬಿಟ್ಟಿದ್ದಾರೆ.
ಯಡಿಯೂರಪ್ಪ ಅವರ ಮನೆಗೆ ಆಕಾಂಕ್ಷಿಗಳು ಬರುತ್ತಲೇ ಇದ್ದಾರೆ. ಬಹುಶಃ ಮುಖ್ಯ ಮಂತ್ರಿಗಳ ಮನೆ ಬಳಿ ಸಾಸಕರ ಸಂಖ್ಯೆ ಕಡಿಮೆ ಇದ್ದರೂ ಯಡಿಯೂರಪ್ಪ ಮನೆ ಬಳಿ ಹಿಂಡು ಎರಡು ದಿನಗಳಿಂದ ಇದೆ.
ಬೆಳಗ್ಗೆಯಿಂದ ಸಂಜೆಯವರೆಗೂ ಸಚಿವ ಸ್ಥಾನಕ್ಕಾಗಿ ಹಲವಾರು ಶಾಸಕರು ಯಡಿಯೂರಪ್ಪ ದುಂಬಾಲು ಬಿದ್ದಿದ್ದಾರೆ. ಅದರಲ್ಲೂ ಯಡಿಯೂರಪ್ಪ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಹೊನ್ನಾಳಿಯ ಎಂ.ಪಿ.ರೇಣುಕಾಚಾರ್ಯ, ವಿರೂಪಾಕ್ಷಪ್ಪ ಬಳ್ಳಾರಿ, ಜೀವರಾಜ್, ಪ್ರೀತಂಗೌಡ ಸೇರಿ ಅನೇಕರು ಸಚಿವ ಸ್ಥಾನಕ್ಕಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ.
ಸಿಎಂ ಸ್ಥಾನದ ಪ್ರಬಲ ಪೈಪೋಟಿಯಲ್ಲಿದ್ದ ಮುರುಗೇಶ್ ನಿರಾಣಿ, ಇದೀಗ ಸಚಿವ ಸ್ಥಾನ ಪಡೆಯಲು ಪ್ರಯಾಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಬಸವರಾಜ ಬೊಮ್ಮಾಯಿಗಿಂತ ಮೊದಲು ಮುಖ್ಯಮಂತ್ರಿ ರೇಸ್‌ನಲ್ಲಿ ನಿರಾಣಿ ಹೆಸರೇ ಇತ್ತು ಎನ್ನಲಾಗಿದೆ. ಹೈಕಮಾಂಡ್ ಕೂಡ ನಿರಾಣಿ ಪರ ಒಲವು ವ್ಯಕ್ತಪಡಿಸಿತ್ತು. ಕೊನೆ ಘಳಿಗೆಯಲ್ಲಿ ಸಚಿವ ಸ್ಥಾನ ತಪ್ಪಿದ್ದು ನಿರಾಣಿಗೆ ಶಾಕ್ ತಂದಿತ್ತು. ಸಿಎಂ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಿರುವುದರಿಂದ ಡಿಸಿಎಂ ಸ್ಥಾನ ಅದೇ ಸಮುದಾಯಕ್ಕೆ ನೀಡಲು ಸಾಧ್ಯವಿಲ್ಲ. ಇದನ್ನು ಅರಿತಿರುವ ನಿರಾಣಿ ಇದೀಗ ಮಂತ್ರಿಗಿರಿಗಾಗಿ ಗಿರಿಕಿ ಹೊಡೆಯುತ್ತಿದ್ದಾರೆ. ಯಡಿಯೂರಪ್ಪ ಅವರಿಗೂ ಹಲವು ಬಾರಿ ಮನವಿ ಮಾಡಿರುವ ಅವರು, ಬೊಮ್ಮಾಯಿಗೂ ಸಾಕಷ್ಟು ಬಾರಿ ಭೇಟಿಯಾಗಿದ್ದಾರೆ. ಮಾತ್ರವಲ್ಲ ಹೈಕಮಾಂಡ್‌ ಮೂಲಕವೂ ಒತ್ತಡ ಹೇರುತ್ತಿದ್ದಾರೆ.
ವಲಸಿಗರಲ್ಲೂ ಆತಂಕ:ಯಡಿಯೂರಪ್ಪ ಸರ್ಕಾರ ಬರಲು ಕಾರಣರಾಗಿದ್ದ ವಲಸಿಗರಿಗೂ ಸಂಪುಟದಿಂದ ಕೈಬಿಡುವ ಆತಂಕ ಆರಂಭವಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಮುಂದುವರಿಯಲೇಬೇಕೆಂದು ಸಾಕಷ್ಟು ಲಾಬಿ ಮಾಡುತ್ತಿದ್ದಾರೆ. ಯಡಿಯೂರಪ್ಪ ನಿವಾಸ ಕಾವೇರಿಗೂ ಅನೇಕ ಬಾರಿ ಭೇಟಿ ಕೊಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ‌ ಮನವಿ ಮಾಡುತ್ತಿರುವ ವಲಸಿಗ ಶಾಸಕರು, ಸಂಪುಟದಲ್ಲಿ ಸ್ಥಾನ ಸಿಗುವಂತೆ ನೋಡಿಕೊಳ್ಳಿ, ನಿಮ್ಮ ಬೆಂಬಲಕ್ಕೆ ನಾವು ಬಂದಿದ್ದೇವೆ. ನಮ್ಮ ಬೆಂಬಲಕ್ಕೆ ನೀವು ನಿಂತುಕೊಳ್ಳಿ ಎಂದು ದುಂಬಾಲು ಬಿದ್ದಿದ್ದಾರೆ.
ಯಡಿಯೂರಪ್ಪ ಸರ್ಕಾರದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ.ಕೆ.ಸುಧಾಕರ್‌ಗೂ ಅದೇ ಭಯ ಕಾಡುತ್ತಿದೆ. ಸಚಿವ ಸ್ಥಾನ ನೀಡಬೇಕು. ಅದರಲ್ಲೂ ಹಿಂದೆ ನಿರ್ವಹಿಸುತ್ತಿದ್ದ ಆರೋಗ್ಯ ಖಾತೆಯನ್ನೇ ಕೊಡಬೇಕೆಂದು ಪ್ರಬಲವಾದ ಒತ್ತಡ ಹೇರುತ್ತಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಕ್ಷಣದಿಂದಲೂ ಬೊಮ್ಮಾಯಿಯವರ ಪಕ್ಕದಲ್ಲೇ ನಿರಂತರವಾಗಿ ಕಾಣಿಸುತ್ತಿದ್ದಾರೆ. ಯಡಿಯೂರಪ್ಪ ಅವರನ್ನೂ ಭೇಟಿ ಅದೇ ಮನವಿಯನ್ನ ಮಾಡಿಕೊಳ್ಳುತ್ತಿದ್ದಾರೆ. ಸಚಿವ ಸಂಪು ವಿಸ್ತರಣೆಯತ್ತಲೇ ಎಲ್ಲರ ಚಿತ್ತ ನೆಟ್ಟಿದ್ದು ಎರಡು ಹಂತಗಳಲ್ಲಿ ವಿಸ್ತರಣೆ ಆಗಲಿದ್ದು ಈ ವಾರದೊಳಗೆ ಮೊದಲ ಹಂತ ವಿಸ್ತರಣೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು