ಕೊಲ್ಲಂ: ಕೇರಳದ ಅಡೂರ್ ಬೈಪಾಸ್ ಬಳಿ ಏಳು ಮಂದಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಕಾರೊಂದು ಕಾಲುವೆಗೆ ಉರುಳಿಬಿದ್ದು ಮೂರು ಮಂದಿ ಮೃತಪಟ್ಟಿರುವ ದಾರುಣ ಘಟನೆ ಬುಧವಾರ ನಡೆದಿದೆ. ದಾರಿ ಗೊತ್ತಿಲ್ಲದೇ ಚಾಲಕ ಗೂಗಲ್ ಮ್ಯಾಪ್ ಬಳತ್ತಿದ್ದ. ಆದರೆ, ಕಾರು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಪದೇಪದೇ ಮ್ಯಾಪ್ ನೋಡುತ್ತಿದ್ದರಿಂದ ಈ ಘಟನೆ ನಡೆದಿದೆ. ಮ್ಯಾಪ್ ತೋರಿದ ದಾರಿಯನ್ನೇ ಅನುಸರಿಸಿದ ಚಾಲಕ ಒಮ್ಮೆ ತಪ್ಪು ದಾರಿಯಲ್ಲಿ ಹೋಗುತ್ತಿದ್ದೇವೆ ಎಂದು ತಿಳಿದಾಗ ಗಾಬರಿಗೊಂಡು ಕಾರನ್ನು ಕಾಲುವೆ ಒಳಗೆ ಇಳಿಸಿದ್ದಾನೆ.
ಮೃತಪಟ್ಟವರನ್ನು ಶ್ರೀಜಾ (45), ಶಾಕುಂತಲಾ (51) ಮತ್ತು ಇಂದಿರಾ (57) ಎಂದು ಗುರುತಿಸಲಾಗಿದೆ. ಕಾಲುವೆಯಲ್ಲಿ ನೀರು ಹೆಚ್ಚಾಗಿ ಹರಿಯುತ್ತಿದ್ದರಿಂದ ಕಾರು ಕೊಚ್ಚಿ ಹೋಗಿ ಸಂಪೂರ್ಣ ಮುಳುಗಡೆಯಾಗಿ ದುರ್ಘಟನೆ ಸಂಭವಿಸಿದೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರೊಡನೆ ಸೇರಿ ನಾಲ್ವರನ್ನು ರಕ್ಷಣೆ ಮಾಡಿದ್ದು, ಉಳಿದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು.
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರು ವೇಗವಾಗಿ ಹರಿಪ್ಪಡ್ ಕಡೆ ತೆರಳುತ್ತಿತ್ತು. ಗೂಗಲ್ ಮ್ಯಾಪ್ನಂತೆ ಅಡೂರ್ ಬೈಪಾಸ್ನಲ್ಲಿ ಕಾರು ಚಾಲಕ ಎಡ ತಿರುವು ತೆಗೆದುಕೊಂಡಿದ್ದಾನೆ. ತಕ್ಷಣವೇ ತಪ್ಪು ದಾರಿಯಲ್ಲಿ ಹೋಗುತ್ತಿದ್ದೇವೆ ಎಂದರಿತ ಚಾಲಕ ಬ್ರೇಕ್ ಹಾಕುವ ಬದುಲು ಕಾರಿನ ಆಕ್ಸಿಲೇಟರ್ ತುಳಿದಿದ್ದಾನೆ. ಬಳಿಕ ನಿಯಂತ್ರಣ ತಪ್ಪಿದ ಕಾರು ಪಕ್ಕದಲ್ಲೇ ಇದ್ದ ಕಾಲುವೆ ಉರುಳಿ ಘಟನೆ ಸಂಭವಿಸಿದೆ.
ಅಪಘಾತಕ್ಕೂ ಮುನ್ನ ಚಾಲಕ ತನ್ನ ಮೊಬೈಲ್ ನೋಡುತ್ತಿದ್ದ ಎಂದು ಗಾಯಾಳುಗಳು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.