ತಿರುವನಂತಪುರ : ಪ್ರತಿನಿತ್ಯ 30,000 ಕೊರೋನಾ ಕೇಸು ಹಾಗೂ ಹೊಸದಾಗಿ ನಿಪಾ ವೈರಸ್ ಸೋಂಕು ಪತ್ತೆ ನಡುವೆಯೂ ಕೇರಳ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ಮತ್ತು ಭಾನುವಾರದ ಕಠಿಣ ನಿರ್ಬಂಧಗಳನ್ನು ತೆರವು ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಪ್ರಕಟಣೆ ಹೊರಡಿಸಿದ್ದಾರೆ.
ಮಂಗಳವಾರ ಕೂಡ ರಾಜ್ಯದಲ್ಲಿ 25772 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 189 ಜನರು ಸಾವನ್ನಪ್ಪಿದ್ದಾರೆ. ಈಗಲೂ ಕೇರಳದಲ್ಲಿ 2.37 ಲಕ್ಷ ಸಕ್ರಿಯ ಸೋಂಕಿತರಿದ್ದು, ದೈನಂದಿನ ಪಾಸಿಟಿವಿಟಿ ದರ, ಗಂಭೀರ ಎನ್ನಬಹುದಾದ ಶೇ.15.87ರಷ್ಟಿದೆ. ಇದೆಲ್ಲದರ ಹೊರತಾಗಿಯೂ ಕೇರಳ ಸರ್ಕಾರ ಕೈಗೊಂಡಿರುವ ನಿರ್ಧಾರ ಸಾಕಷ್ಟುಟೀಕೆಗೆ ಗುರಿಯಾಗಿದೆ. ಆರ್ಥಿಕತೆ ಕುಸಿದಿರುವುದನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ, ನಿರ್ಬಂಧ ಸಡಿಲಿಕೆ ಮೂಲಕ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂಬ ದೂರುಗಳು ವ್ಯಕ್ತವಾಗಿವೆ.