ಕೇರಳ : ಮುಂದಿನ ತಿಂಗಳ ಅಂತ್ಯದವರೆಗೆ ಕೇರಳದಿಂದ ಉದ್ಯೋಗಿಗಳು, ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬರುವಂತಿಲ್ಲ.
ಕೇರಳದಲ್ಲಿ ಕೊರೋನಾ ಹಾಗೂ ನಿಫಾ ಸೋಂಕಿನ ಭೀತಿ ಹೆಚ್ಚು ಕಾಣುತ್ತಿದ್ದು, ಎರಡು ತಿಂಗಳವರೆಗೆ ಕರ್ನಾಟಕಕ್ಕೆ ಬರುವುದನ್ನು ಮುಂದೂಡಿ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜವೈದ್ ಅಕ್ತರ್ ಸಲಹೆ ಹೊರಡಿಸಿದ್ದು, ಇದರ ಅನ್ವಯ ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ತಪ್ಪಿಸಬೇಕಿದೆ. ಅದಕ್ಕಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದೆ. ಈಗಾಗಲೇ ಕೇರಳದಿಂದ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಎನ್ನಲಾಗಿತ್ತು.
ವರದಿಯಲ್ಲಿ ನೆಗೆಟಿವ್ ಇದ್ದರೂ ಸ್ಥಳದಲ್ಲಿ ಪರೀಕ್ಷಿಸಿದಾಗ ಎಷ್ಟೋ ಮಂದಿಗೆ ಪಾಸಿಟಿವ್ ಬಂದಿದೆ. ಪ್ರಸ್ತುತ ಅನುಸರಿಸುತ್ತಿರುವ ಕ್ರಮಗಳ ಜೊತೆ ಈ ಕ್ರಮವನ್ನು ಸೇರಿಸಲು ಸಲಹೆ ನೀಡಲಾಗಿದೆ. ತುರ್ತು ಅಗತ್ಯ ಇಲ್ಲದೆ ಕೇರಳದಿಂದ ಯಾರು ಇಲ್ಲಿಗೆ ಬರುವಂತಿಲ್ಲ. ಮತ್ತು ಇಲ್ಲಿಂದ ಕೇರಳಕ್ಕೆ ಹೋಗುವಂತಿಲ್ಲ.
ಆಸ್ಪತ್ರೆ, ನರ್ಸಿಂಗ್ ಹೋಂ, ಕಾಲೇಜು, ಕಚೇರಿ ಮಾಲಿಕರು ಕೇರಳದಲ್ಲಿರುವ ತಮ್ಮ ಉದ್ಯೋಗಿಗಳು, ವಿದ್ಯಾರ್ಥಿಗಳನ್ನು ಅಕ್ಟೋಬರ್ವರೆಗೆ ರಾಜ್ಯಕ್ಕೆ ಬಾರದಂತೆ ತಡೆಯಬೇಕಿದೆ. ಈಗಾಗಲೇ ಬಂದಿರುವವರಿಗೆ ಅಕ್ಟೋಬರ್ವರೆಗೆ ಕೇರಳಕ್ಕೆ ತೆರಳಲು ಅವಕಾಶ ಇಲ್ಲ ಎಂದು ಸೂಚಿಸಲಾಗಿದೆ.