ದೇವಗಢ,ಡಿ.23 : ವಾಗ್ವಾದ ನಡೆದ ಹಿನ್ನೆಲೆಯಲ್ಲಿ 14 ವರ್ಷ ವಯಸ್ಸಿನ ಬಾಲಕನೊಬ್ಬನನ್ನು ಆತನ ಸ್ನೇಹಿತರೇ ಗಂಟಲು ಸೀಳಿ, ಕೈ-ಕಾಲುಗಳನ್ನು ಕತ್ತರಿಸಿ ಶವವನ್ನು ಗೋಣಿಚೀಲದಲ್ಲಿ ಹಾಕಿ ಅರಣ್ಯವೊಂದರಲ್ಲಿ ಎಸೆದಿರುವ ಭೀಕರ ಘಟನೆ ಝಾರ್ಖಂಡ್ನ ದೇವಗಢ ಜಿಲ್ಲೆಯಲ್ಲಿ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಬಾಲಕ ಹಿಂದಿನ ರಾತ್ರಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾನೆಂದು ಅವನ ಕುಟುಂಬ ಬುಧವಾರ ದೂರು ನೀಡಿತ್ತು ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಪವನ್ಕುಮಾರ್ ಹೇಳಿದ್ದಾರೆ.
ತನಿಖೆಯ ವೇಳೆ ಹತ ಬಾಲಕನ ಗೆಳೆಯ 14 ವರ್ಷದ ಬಾಲಕನನ್ನು ಪತ್ತೆ ಮಾಡಲಾಯಿತು. ಅವನು ಹತ ಬಾಲಕನನ್ನು ರೋಹಿಣಿ ಜಿಲ್ಲೆಯ ಜಸಿದ್ಧಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿರುವ ಬಾಲಕನ ಮನೆಯ ಬಳಿ ಮಂಗಳವಾರ ರಾತ್ರಿ 8.30ಕ್ಕೆ ಭೇಟಿಯಾಗಿದ್ದಾಗಿ, ಆಗ ಅವಿನಾಶ್(19) ಎಂಬ ಮತ್ತೋರ್ವ ಗೆಳೆಯ ಜೊತೆಗೂಡಿದ್ದಾಗಿ ಪೊಲೀಸರಿಗೆ ತಿಳಿಸಿದ ಎಂದು ಕುಮಾರ್ ವಿವರಿಸಿದ್ದಾರೆ.
ಮೂವರೂ ಪಲಂಗಾ ಪಹಾಡ್ ಅರಣ್ಯಕ್ಕೆ ಹೋದರು. ಅಲ್ಲಿ ಅವಿನಾಶ್ ಮತ್ತು ಮೃತ ಬಾಲಕನ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಯಿತು. ಕೂಡಲೇ ಅವಿನಾಶ್ ಕತ್ತಿಯೊಂದನ್ನು ತೆಗೆದುಕೊಂಡು ಬಾಲಕನನ್ನು ಇರಿದು, ಗಂಟಲು ಸೀಳಿ ಕೊಲೆಗೈದು ಅನಂತರ ಆತನ ಕೈಕಾಲುಗಳನ್ನು ಕತ್ತರಿಸಿ ಶರೀರದ ಭಾಗಗಳನ್ನು ಮೂರು ಗೋಣಿಚೀಲಗಳಲ್ಲಿ ಹಾಕಿ ಕಾಡಿನಲ್ಲಿ ಎಸೆದಿದ್ದಾಗಿ ತಿಳಿದುಬಂದಿತು ಎಂದು ಕುಮಾರ್ ನುಡಿದಿದ್ದಾರೆ.
ಶವವನ್ನು ವಶಪಡಿಸಿಕೊಂಡ ಪೊಲೀಸರು ಅವಿನಾಶ್ನನ್ನು ಬಂಧಿಸಿದ್ದಾರೆ. ಅವಿನಾಶ್ ಕೂಡ ತಪ್ಪೋಪ್ಪಿಕೊಂಡಿದ್ದು, ರಕ್ತಸಿಕ್ತ ಕತ್ತಿ ಮತ್ತು ಕೊಲೆಯಾದ ಬಾಲಕನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕುಮಾರ್ ವಿವರಿಸಿದ್ದಾರೆ.