ಶ್ರೀನಗರ : ಅಮರನಾಥ ಯಾತ್ರೆಗೆ ಮತ್ತೊಂದು ವಿಘ್ನ ಎದುರಾಗಿದೆ. ಕೆಲವೇ ದಿನಗಳ ಅಂತರದಲ್ಲಿ ಮತ್ತೆ ದಕ್ಷಿಣ ಕಾಶ್ಮೀರದಲ್ಲಿ ಭಾರಿ ಕುಸಿತ ಸಂಭವಿಸಿದೆ. ಇದರ ಪರಿಣಾಮ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ರಂಬನ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ಬಾಲ್ಟಾಲ್ ದಾರಿ ಮೂಲಕ ಅಮರನಾಥ ದರ್ಶನ ಮಾಡಲು ಹೊರಟ ಯಾತ್ರಿಕರಿಗೆ ಸಮಸ್ಯೆಯಾಗಿದೆ. ಭೂಕುಸಿತ ಜೊತೆ ಹವಾಮಾನ ವೈಪರಿತ್ಯ ಕೂಡ ಯಾತ್ರೆಗೆ ಹಿನ್ನಡೆಯಾಗಿದೆ.
ಈ ಕಾರಣ ಮುಂದಿನ ಆದೇಶದವರೆಗೆ ಯಾತ್ರೆ ಸ್ಥಗಿತಗೊಳಿಸಲಾಗಿದೆ. ಸದ್ಯ ಹೆದ್ದಾರಿ ಬಳಿ ಸಂಭವಿಸಿದ ಭೂಕುಸಿತದಿಂದ ರಸ್ತೆಗಳು ಕೊಚ್ಚಿ ಹೋಗಿದೆ. ಹೀಗಾಗಿ ತಾತ್ಕಾಲಿಕ ರಸ್ತೆ ನಿರ್ಮಾಣ ಕಾರ್ಯವೂ ನಡೆಯುತ್ತಿದೆ.
ಯಾತ್ರಿ ನಿವಾಸ ಬೇಸ್ ಕ್ಯಾಂಪ್ನಿಂದ 2,504 ಭಕ್ತರು ಬಾಲ್ಟಾಲ್ ಮಾರ್ಗ ಮೂಲಕ ಅಮರನಾಥನ ದರ್ಶನಕ್ಕೆ ಹೊರಟಿದ್ದರು. ಆದರೆ ರಂಬನ್ ಜಿಲ್ಲೆ ಪ್ರವೇಶಿಸುತ್ತಿದ್ದಂತೆ ರಸ್ತೆಗಳು ಭೂಕುಸಿತಕ್ಕೆ ಕೊಚ್ಚಿ ಹೋಗಿದೆ. ಹೀಗಾಗಿ ಭಕ್ತರು ರಂಬನ್ ಜಿಲ್ಲೆಯಲ್ಲಿ ಉಳಿದುಕೊಳ್ಳಬೇಕಾಗಿದೆ.
ಪಹಲ್ಗಾಮ್ ಮಾರ್ಗ ಮೂಲಕ ತೆರಳಿದ 4,549 ಯಾತ್ರಾರ್ಥಿಗಳು ಪ್ರಯಾಣ ಮುಂದುವರಿಸಿದ್ದಾರೆ. ಇನ್ನು ಅಮರನಾಥ ದರ್ಶನ ಮಾಡಿ ಹಿಂತಿರುವ ಭಕ್ತರ ಮಾರ್ಗವನ್ನು ಬದಲಿಸಲಾಗಿದೆ.
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ರಂಬನ್ ಜಿಲ್ಲೆ ಸೇರಿದಂತೆ ದಕ್ಷಿಣ ಕಾಶ್ಮೀರದ ಹಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ. ಶನಿವಾರ ಶ್ರೀಗನರ- ಜಮ್ಮು ಹೆದ್ದಾರಿ ಬಂದ್ ಮಾಡಲಾಗಿದೆ. ಯಾವುದೇ ಯಾತ್ರಿಕರನ್ನ ಹಾಗೂ ಇತರ ಪ್ರಯಾಣಿಕರನ್ನು ಈ ದಾರಿ ಮೂಲಕ ಬಿಡಲು ಸಾಧ್ಯವಿಲ್ಲ. ಇಂದು ಸಂಜೆಯೊಳಗೆ ತಾತ್ಕಾಲಿಕ ರಸ್ತೆ ನಿರ್ಮಿಸಲಾಗುವುದು ಎಂದು ಸ್ಥಳೀಯ ಆಡಳಿತ ಹೇಳಿದೆ.