ಶ್ರೀನಗರ: “ಜಮ್ಮು ಕಾಶ್ಮೀರ ಭಾರತದ ಕಿರೀಟ ಇದ್ದಂತೆ”. ದಶಕಗಳಿಂದ ಕಾಶ್ಮೀರದ ಬಗ್ಗೆ ಇದ್ದ ಪೂರ್ವಾಗ್ರಹ ಅಂತ್ಯವಾಗಿದೆ. ಜಮ್ಮು ಕಾಶ್ಮೀರದ ಅಭಿವೃದ್ದಿ ಭಾರತದ ಮೊದಲ ಆದ್ಯತೆ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ. ಶ್ರೀನಗರದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ತಮ್ಮ ವಿರೋಧಿಗಳಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.
ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದಾದ ಬಳಿಕ ಮೊದಲ ಬಾರಿಗೆ ಶ್ರೀನಗರಕ್ಕೆ ಭೇಟಿ ನೀಡಿದ್ದಾರೆ. ಕಣಿವೆ ರಾಜ್ಯದಲ್ಲಿ ಹೈ ಸೆಕ್ಯೂರಿಟಿಯ ಮಧ್ಯೆ ಮೋದಿ ಅವರನ್ನು ಸ್ವಾಗತಿಸಲಾಗಿದೆ. ಶ್ರೀನಗರಕ್ಕೆ ಆಗಮಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕರಾಚಾರ್ಯ ಪೀಠದ ಬೆಟ್ಟ ನೋಡಿ ದೂರದಿಂದಲೇ ಕೈ ಮುಗಿದ ನಮಸ್ಕಾರ ಮಾಡಿದರು.
ಇನ್ನು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದು ಮಹತ್ವದ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಜಮ್ಮು ಕಾಶ್ಮೀರ ಕೇವಲ ಒಂದು ಜಾಗವಲ್ಲ. ಇದು ಭಾರತದ ಕಿರೀಟವಿದ್ದಂತೆ. ಕಾಶ್ಮೀರದ ಬಗೆಗಿನ ಪೂರ್ವಾಗ್ರಹವನ್ನು ಅಂತ್ಯ ಮಾಡಿದ್ದೇವೆ. ನಿಮ್ಮ ಹೃದಯ ಗೆಲ್ಲಲು ನಾನು ಇಲ್ಲಿಗೆ ಬಂದಿದ್ದೇನೆ. ಭರವಸೆಗಳನ್ನು ಈಡೇರಿಸಲು ಮೋದಿ ಗ್ಯಾರಂಟಿ ನೀಡಲಾಗಿದೆ. ಮೋದಿಯ ಗ್ಯಾರಂಟಿ, ಪೂರ್ತಿಯಾಗುವ ಗ್ಯಾರಂಟಿ. ದಶಕಗಳಿಂದ ಕಾಶ್ಮೀರದ ಬಗ್ಗೆ ಇದ್ದ ಪೂರ್ವಾಗ್ರಹ ಅಂತ್ಯವಾಗಿದೆ ಎಂದರು.