ಜಮ್ಮು-ಕಾಶ್ಮೀರ: ಜಮ್ಮು ಕಾಶ್ಮೀರ ಆಡಳಿತವು ತ್ರಿವರ್ಣ ಧ್ವಜವನ್ನು ಖರೀದಿಸುವಂತೆ ಜನತೆ ಮೇಲೆ ಒತ್ತಾಯ ಹೇರಲಾಗುತ್ತಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಆಗಸ್ಟ್ 13 ರಿಂದ ಆಗಸ್ಟ್ 15ರ ನಡುವೆ ದೇಶದ ನಾಗರಿಕರು ತಮ್ಮ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಾಡುವಂತೆ ಪ್ರೇರೇಪಿಸಲು ಆಜಾದಿ ಕಾ ಅಮೃತ ಮಹೋತ್ಸವ ಎಂಬ ಅಭಿಯಾನವನ್ನು ಸರ್ಕಾರ ನಡೆಸುತ್ತಿದೆ.
ಈ ಸಂಬಂಧ ಟ್ವಿಟ್ಟರ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡ ಮೆಹಬೂಬಾ ಮುಫ್ತಿ, ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್ಬೆಹಾರಾ ಪಾಲಿಕೆಯಲ್ಲಿ ಒತ್ತಾಯಿಸಲಾಗುತ್ತಿದೆ. ಪ್ರತಿ ಅಂಗಡಿಯವರೂ ಅಭಿಯಾನಕ್ಕಾಗಿ ಒಂದು ಧ್ವಜವನ್ನಾದರೂ ಕೊಂಡುಕೊಳ್ಳುವಂತೆ 20 ರೂ. ಡೆಪಾಸಿಟ್ ಮಾಡಿ ಎಂದು ಸಾರ್ವಜನಿಕವಾಗಿ ವಾಹನವೊಂದರ ಮೇಲೆ ಲೌಡ್ಸ್ಪೀಕರ್ ಮೂಲಕ ಘೋಷಣೆ ಮಾಡಲಾಗುತ್ತಿದೆ. ದೇಶಪ್ರೇಮ ಎಂಬುದು ಸ್ವಾಭಾವಿಕವಾಗಿ ಬರಬೇಕೇ ಹೊರತು ಅದನ್ನು ಜನರ ಮೇಲೆ ಹೇರಕೂಡದು ಎಂದು ಕಿಡಿಕಾರಿದ್ದಾರೆ.
ವಿದ್ಯಾರ್ಥಿಗಳು, ಅಂಗಡಿಯವರಿಗೆ ಹಾಗೂ ಸಿಬ್ಬಂದಿಗೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಜಮ್ಮು ಕಾಶ್ಮೀರ ಆಡಳಿತ ಒತ್ತಾಯಿಸುತ್ತಿರುವ ರೀತಿ ಹೇಗಿದೆ ಎಂದರೆ ಕಾಶ್ಮೀರ ವಶಪಡಿಸಿಕೊಳ್ಳಬೇಕಾದ ಶತ್ರು ಪ್ರದೇಶ ಎನ್ನುವಂತಿದೆ. ಅಲ್ಲದೆ, ಅಭಿಯಾನದಲ್ಲಿ ಭಾಗವಹಿಸಲು ನಿರಾಕರಿಸಿದವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಸ್ಥಳೀಯರಿಗೆ ಬೆದರಿಕೆ ಹಾಕಿರುವುದಾಗಿಯೂ ಲೌಡ್ಸ್ಪೀಕರ್ ಮೂಲಕ ಘೋಷಿಸಲಾಗಿದೆ ಎಂದೂ ಮುಫ್ತಿ ಆರೋಪಿಸಿದ್ದಾರೆ.