ಶ್ರೀನಗರ : ಶ್ರೀನಗರದ ಲಾಲ್ ಚೌಕ್ ನ ಅಮೀರಾ ಕಾದಲ್ ಮಾರುಕಟ್ಟೆಯಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು, ಪೊಲೀಸ್ ಸೇರಿದಂತೆ ಕನಿಷ್ಠ ಹನ್ನೊಂದು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯನಿರತ ಅಮಿರಾ ಕಾದಲ್ ಮಾರುಕಟ್ಟೆಯಲ್ಲಿ ಉಗ್ರರು ಗ್ರೆನೇಡ್ ಎಸೆದಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಒಬ್ಬ ಪೋಲೀಸ್ ಸೇರಿದಂತೆ ಹನ್ನೊಂದು ಜನರಿಗೆ ಗಾಯಗಳಾಗಿವೆ ಎಂದು ಮೂಲಗಳು ವರದಿ ಮಾಡಿದೆ.
ಇನ್ನು ಗಾಯಗೊಂಡವರನ್ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿ ಹೇಳಿದರು. ಏತನ್ಮಧ್ಯೆ ದಾಳಿಕೋರರನ್ನ ಬಂಧನಕ್ಕಾಗಿ ಪ್ರದೇಶವನ್ನು ಸೇನೆ ಸುತ್ತುವರಿದಿದೆ. ಈ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.