ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಜಮ್ಮು- ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಈ ಬೆನ್ನಲ್ಲೆ ಕಾಶ್ಮೀರದ ಕೆಲವು ಪ್ರದೇಶಗಳ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಅಮಿತ್ ಕಾಶ್ಮೀರ ಭೇಟಿ ವೇಳೆ ಶ್ರೀನಗರದಿಂದ ಶಾರ್ಜಾಗೆ ಹಾರಾಟ ನಡೆಸಲಿರುವ ಮೊದಲ ವಿಮಾನಕ್ಕೆ ನಾಳೆ ಚಾಲನೆ ನೀಡಲಿದ್ದಾರೆ. ಹಾಗಾಗಿ ಅಲ್ಲಿನ ಪೊಲೀಸರು ಮುನ್ನೆಚ್ಚರಿಕೆ ವಹಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಹಲವು ಸ್ಥಳಗಳನ್ನುಈಗಾಗಲೇ ಪರಿಶೀಲನೆ ನಡೆಸಲಾಗಿದೆ. ಶ್ರೀನಗರದಲ್ಲಿ ಸಂಚರಿಸುವ ವಾಹನ ಮತ್ತು ವಾಹನ ಸವಾರರ ಗುರುತಿನ ಚೀಟಿಯನ್ನು ಪರಿಶೀಲಿಸಲಾಗುತ್ತಿದ್ದು, ಕೆಲವು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಇತ್ತೀಚೆಗೆ ಭಯೋತ್ಪಾದಕರ ದಾಳಿಯಲ್ಲಿ ಸ್ಥಳೀಯರಲ್ಲದ ನಾಲ್ಕು ಮಂದಿ ಸೇರಿದಂತೆ 9 ನಾಗರಿಕರು ಮೃತಪಟ್ಟಿದ್ದು, ಈ ವಿಚಾರವಾಗಿ ಅಮಿತ್ ಶಾ ಚರ್ಚೆ ನಡೆಸಲಿದ್ದಾರೆ.