ಶ್ರೀನಗರ: ಇಲ್ಲಿನ ಹೊರವಲಯದ ಸೌರಾ ನಗರದ ಅಂಚಾರ ಪ್ರದೇಶದಲ್ಲಿ ಮಂಗಳವಾರ ಉಗ್ರರು ನಡೆಸಿದ ಗುಂಡಿನ ದಾಳಿಗೆ ಪೊಲೀಸ್ ಕಾನ್ಸ್ಟೆಬಲ್ವೊಬ್ಬರು ಮೃತಪಟ್ಟಿದ್ದು,ಅವರ ಮಗಳು ಗಾಯಗೊಂಡಿದ್ದಾರೆ.
ಸೈಫುಲ್ಲಾ ಖಾದ್ರಿ ಹುತಾತ್ಮರಾದ ಕಾನ್ಸ್ಟೆಬಲ್. ‘ಕಾನ್ಸ್ಟೆಬಲ್ ಸೈಫುಲ್ಲಾ ಖಾದ್ರಿ ಅವರು ತಮ್ಮ ಮಗಳನ್ನು ಟ್ಯೂಷನ್ಗೆ ಕರೆದೊಯ್ಯುತ್ತಿದ್ದ ವೇಳೆ ಅವರ ಮನೆಯ ಸಮೀಪದಲ್ಲೇ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಗಾಯಗೊಂಡ ಇಬ್ಬರನ್ನೂ ಸ್ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಯಿತು.
ಚಿಕಿತ್ಸೆಗೆ ಸ್ಪಂದಿಸದೇ ಸೈಫುಲ್ಲಾ ಖಾದ್ರಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರ ಏಳು ವರ್ಷದ ಮಗಳ ಬಲಗೈಗೆ ಗುಂಡೇಟು ತಗುಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.