ನವದೆಹಲಿ: ಗಡಿಯಾಚೇಗಿನ ಭಯೋತ್ಪಾದನೆ ನೀತಿಯನ್ನು ಬಳಸುವ ಮೂಲಕ ಪಾಕಿಸ್ತಾನ ಭಾರತವನ್ನು ವಿಶ್ವಸಂಸ್ಥೆ ಟೇಬಲ್ ಗೆ ಕರೆತರುವ ತಂತ್ರ ಅನುಸರಿಸುತ್ತಿರುವುದಾಗಿ ತಿಳಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈ.ಶಂಕರ್ ಅವರು, ಪಾಕ್ ನ ಹಳೆ ಚಾಳಿಯ ನೀತಿಯನ್ನು ಭಾರತ ಅಪ್ರಸ್ತುತಗೊಳಿಸಿದೆ ಎಂದರು.
ಎಎನ್ ಐ ಸಂದರ್ಶನದಲ್ಲಿ ಮಾತನಾಡಿದ ಜೈಶಂಕರ್, ಭಾರತ ಈಗ ಪಾಕ್ ನ ಕುಟಿಲ ನೀತಿಯನ್ನು ಅಪ್ರಸ್ತುತಗೊಳಿಸಿದೆ. ಪಾಕಿಸ್ತಾನ ಹಲವು ದಶಕಗಳಿಂದಲೂ ಗಡಿಯಾಚೇಗಿನ ಭಯೋತ್ಪಾದನೆಯ ನೆಪದಲ್ಲಿ ಭಾರತವನ್ನು ವಿಶ್ವಸಂಸ್ಥೆಯಲ್ಲಿ ಕಟ್ಟಿಹಾಕಲು ಪ್ರಯತ್ನಿಸಿತ್ತು. ಇದು ಪಾಕ್ ನ ಮೂಲಭೂತ ನೀತಿಯಾಗಿತ್ತು. ಆದರೆ ಭಾರತ ಈಗ ಪಾಕ್ ನ ಕುಟಿಲ ನೀತಿಯಯನ್ನು ಹೊಸಕಿ ಹಾಕುತ್ತಿದೆ ಎಂದು ಹೇಳಿದರು.
ನಾವು ನೆರೆಯ ದೇಶದೊಂದಿಗೆ ವ್ಯವಹರಿಸುವುದಿಲ್ಲ ಎಂಬುದು ಒಂದು ಪ್ರಕರಣವಲ್ಲ. ಕೊನೆಗೂ ನೆರೆಹೊರೆಯವರು, ನೆರೆಹೊರೆಯವರಾಗಿರುತ್ತಾರೆ. ಆದರೆ ಪಾಕಿಸ್ತಾನ ನಿಗದಿಗೊಳಿಸುವ ನೀತಿಯ ಆಧಾರದ ಮೇಲೆ ನಾವು ವ್ಯವಹರಿಸುವುದಿಲ್ಲ. ಪಾಕಿಸ್ತಾನವೇ ಭಯೋತ್ಪಾದನೆ ವಿಚಾರದಲ್ಲಿ ವಿಶ್ವಸಂಸ್ಥೆಯಲ್ಲಿ ಮಾತುಕತೆಯ ಟೇಬಲ್ ಗೆ ಬರಬೇಕು ಎಂದು ಜೈಶಂಕರ್ ಪ್ರತಿಪಾದಿಸಿದ್ದಾರೆ. ಕೆನಡಾದಲ್ಲಿನ ಖಲಿಸ್ತಾನಿ ಚಳವಳಿಯ ತೀವ್ರತೆ ಕುರಿತು ಮಾತನಾಡಿದ ಅವರು, ಕೆನಡಾದ ನೆಲದಲ್ಲಿ ಖಲಿಸ್ತಾನಿ ಸಂಘಟನೆಗೆ ಭಾರತ ಮತ್ತು ಕೆನಡಾದ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಹಾಳು ಮಾಡುವ ಚಟುವಟಿಕೆಯಲ್ಲಿ ತೊಡಗಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.