ಚೆನ್ನೈ: ಅಯೋಧ್ಯೆಯ ಸಂತ ಪರಮಹಂಸ ಆಚಾರ್ಯ ಅವರು ಸೋಮವಾರ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಸಾಂಕೇತಿಕ ‘ಶಿರಚ್ಛೇದ’ ನಡೆಸಿದ್ದರು. ಈ ವೇಳೆ ಮಾತನಾಡಿದ ಆಚಾರ್ಯ, ಸ್ಟಾಲಿನ್ ಶಿರಚ್ಛೇದ ಮಾಡಿದವರಿಗೆ 10 ಕೋಟಿ ರೂಪಾಯಿಗಳ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ತಮಿಳುನಾಡಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿಯ ಮೊಮ್ಮಗ ನಾನು. ಇಂತಹ ಬೆದರಿಕೆಗಳ ಬಗ್ಗೆ ಚಿಂತಿಸುವುದಿಲ್ಲಎಂದು ಹೇಳಿದ್ದಾರೆ. ನನ್ನ ತಲೆ ತೆಗೆಯಲು ಕರೆ ನೀಡಿದವರಿಗೆ ನಾನು ಇಷ್ಟೇ ಹೇಳಲು ಇಚ್ಛಿಸುತ್ತೇನೆ, ನನ್ನ ತಲೆ ಬಾಚಲು 10 ರೂಪಾಯಿ ಬಾಚಣಿಗೆ ಸಾಕು ಎಂದು ವ್ಯಂಗ್ಯವಾಡಿದ್ದಾರೆ.
ಇಂತಹ ಬೆದರಿಕೆ ನಮ್ಮ ಕುಟುಂಬಕ್ಕೆ ಹೊಸದೇನಲ್ಲ. ತಮಿಳು ಜನರಿಗಾಗಿ ರೈಲು ಹಳಿ ಮೇಲೆ ಮಲಗಿದ ಕಲಾವಿದನ ಮೊಮ್ಮಗ ನಾನು” ಎಂದು ಸ್ಟಾಲಿನ್ ಹೇಳಿದ್ದಾರೆ.
ಕರುಣಾನಿಧಿ ಅವರು ಪೆರಿಯಾರ್ ಆರಂಭಿಸಿದ ವಿಚಾರವಾದಿ ಚಳುವಳಿಯ ಮಹಾನ್ ನೇತಾರ ಮತ್ತು ಬ್ರಾಹ್ಮಣ ವಿರೋಧಿ ದ್ರಾವಿಡ ಚಳವಳಿಯ ನೇತೃತ್ವ ವಹಿಸಿದ್ದರು ಅಂತಹ ಕುಟುಂಬದಲ್ಲಿ ಹುಟ್ಟಿದ ನಾನು ಇಂತಹ ವಿಚಾರಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಅಲ್ಲದೆ 1953 ರಲ್ಲಿ ಉದ್ಯಮಿ ದಾಲ್ಮಿಯಾಸ್ ಅವರ ಹೆಸರನ್ನು ಗ್ರಾಮವೊಂದಕ್ಕೆ ಮರುನಾಮಕರಣ ಮಾಡುವುದನ್ನು ವಿರೋಧಿಸಿ, ಕರುಣಾನಿಧಿ ನೇತೃತ್ವದಲ್ಲಿ ಡಿಎಂಕೆ ಕಾರ್ಯಕರ್ತರು ರೈಲು ಹಳಿಗಳ ಮೇಲೆ ಮಲಗಿ ಪ್ರತಿಭಟಿಸಿದ ಘಟನೆಯನ್ನು ಮತ್ತೆ ನೆನಪಿಸಿದ್ದಾರೆ.