ಅಲಹಾಬಾದ್: ಇಡೀ ದೇಶದ ಗಮನ ಸೆಳೆದಿರುವ ಜ್ಞಾನವಾಪಿ ಗದ್ದಲದಲ್ಲಿ ಹಿಂದೂ ಪರ ಹೋರಾಟಗಾರರಿಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ಜ್ಞಾನವಾಪಿ ಆವರಣದಲ್ಲಿ ವೈಜ್ಞಾನಿಕ ಸರ್ವೇಗೆ ಒಪ್ಪಿಗೆ ನೀಡಿದ್ದ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದಿದ್ದು ಮಸೀದಿ ಸಮಿತಿಯ ಅರ್ಜಿಯನ್ನು ವಜಾಗೊಳಿಸಿದೆ. ಇಂದಿಯಿಂದ ವೈಜ್ಞಾನಿಕ ಸಮೀಕ್ಷೆಗೆ ಗ್ರೀನ್ಸಿಗ್ನಲ್ ನೀಡಿದೆ.
ಜ್ಞಾನವಾಪಿ ದೇಗುಲವೋ, ಮಸೀದಿಯೋ ಎಂಬುದನ್ನು ತಿಳಿಯಲು ವಾರಾಣಸಿ ಜಿಲ್ಲಾ ನ್ಯಾಯಾಲಯ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿತ್ತು. ಆದ್ರೆ, ವಾರಣಾಸಿ ಕೋರ್ಟ್ ನೀಡಿದ್ದ ಸರ್ವೇ ಆದೇಶವನ್ನು ಪ್ರಶ್ನಿಸಿ ಮಸೀದಿ ಪರ ಸಮಿತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ವಾರಾಣಸಿ ಕೋರ್ಟ್ನ ಆದೇಶ ಎತ್ತಿಹಿಡಿದ ಹೈಕೋರ್ಟ್ ಜ್ಞಾನವಾಪಿ ಆವರಣದಲ್ಲಿ ಸಮೀಕ್ಷೆಗೆ ಗ್ರೀನ್ಸಿಗ್ನಲ್ ನೀಡಿದೆ.
ಜ್ಞಾನವಾಪಿ ಆವರಣದಲ್ಲಿ ASI ಸಮೀಕ್ಷೆ ಮುಂದುವರಿಯುತ್ತದೆ. ಯಾವುದೇ ಅಗೆಯುವಿಕೆ ಅಥವಾ ಹಾನಿ ಮಾಡಬಾರದು ಎಂದು ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಹಾಗೂ ನ್ಯಾಯ ಒದಗಿಸುವ ದೃಷ್ಟಿಯಿಂದ ವೈಜ್ಞಾನಿಕ ಸರ್ವೇ ಅಗತ್ಯವೆಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿ, ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ, ಸಮೀಕ್ಷೆಗೆ ಗ್ರೀನ್ಸಿಗ್ನಲ್ ನೀಡಿದೆ.
ಕೂಡಲೇ ವೈಜ್ಞಾನಿಕ ಸಮೀಕ್ಷೆ ಆರಂಭಿಸಬಹುದೆಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಇದರ ಬೆನ್ನಲ್ಲೇ ಇಂದು ಬೆಳಗ್ಗೆ ಜ್ಞಾನವಾಪಿ ಆವರಣದಲ್ಲಿ ಸಮೀಕ್ಷ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಡಿಸಿಎಂ ಕೇಶವ ಪ್ರಸಾದ್ ಮೌರ್ಯ, ನಾನು ಈ ತೀರ್ಪನ್ನು ಸ್ವಾಗತಿಸುತ್ತೇನೆ. ಸತ್ಯ ಹೊರಬರುವ ವಿಶ್ವಾಸವಿದೆ ಎಂದಿದ್ದಾರೆ.