ಸೂರತ್: ಕಿಸೆಯಲ್ಲಿ ಲಕ್ಷಗಟ್ಟಲೇ ಹಣವಿದ್ದರೂ ಹಸಿವಿನಿಂದ ಭಿಕ್ಷುಕನೊಬ್ಬ ಮೃತಪಟ್ಟ ಘಟನೆ ಸೂರತ್ ನಲ್ಲಿ ನಡೆದಿದೆ. ಕಳೆದ ಎರಡು ದಿನಗಳಿಂದ ಗಾಂಧಿ ಗ್ರಂಥಾಲಯದ ಬಳಿ ಭಿಕ್ಷುಕನೊಬ್ಬ ರಸ್ತೆಬದಿ ಬಿದ್ದಿರುವುದನ್ನು ಅಂಗಡಿ ಮಾಲೀಕರು ಗಮನಿಸಿ, 108ಕ್ಕೆ ಕರೆ ಮಾಡಿ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಿಕ್ಷುಕ ಸಾವನ್ನಪ್ಪಿದ್ದಾನೆ.
ಕಳೆದ ಎರಡು ದಿನಗಳಿಂದ ಏನನ್ನೂ ತಿನ್ನದೇ ಹಸಿವಿನಿಂದ ಸಾವನ್ನಪ್ಪಿರುವುದಾಗಿ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಆಸ್ಪತ್ರೆ ತುರ್ತು ವೈದ್ಯಕೀಯ ವಿಭಾಗದ ಡಾ.ಭಾವೇಶ್ ಪಟೇಲ್ ಅವರು ಹೇಳುವಂತೆ ‘ ಮೃತ ಭಿಕ್ಷುಕ ಗುಜರಾತಿ ಮಾತನಾಡುತ್ತಿದ್ದರು, ಪ್ರಾಥಮಿಕ ಪರೀಕ್ಷೆಯ ನಂತರ ಅವರನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ದಾಗ ಭಿಕ್ಷುಕನ ಬಳಿ ರೂ.1.14 ಲಕ್ಷ ನಗದು ಪತ್ತೆಯಾಗಿದೆ.
10- 20ರೂಪಾಯಿಯಿಂದ ಹಿಡಿದು ಸಾಕಷ್ಟು ನೋಟುಗಳನ್ನು ಸಣ್ಣ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಪ್ಯಾಂಟ್ ಜೇಬಿನಲ್ಲಿ ಇರಿಸಲಾಗಿತ್ತು. ಈ ಹಣವನ್ನು ವಲ್ಸಾದ್ ಪಟ್ಟಣದ ಪೊಲೀಸರಿಗೆ ಹಸ್ತಾಂತರಿಸಲಾಗಿದೆ’ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ವೃದ್ಧನನ್ನು ಆಸ್ಪತ್ರೆಗೆ ಕರೆತಂದಾಗ ಚಹಾ ಕೊಡಿ ಎಂದು ಕೇಳಿದರು. ಆತ ಹಸಿದ್ದಿದ್ದ ಮತ್ತು ಅವನ ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆಯಾಗಿತ್ತು. ಆದರೆ ಒಂದು ಗಂಟೆಯ ನಂತರ ಭಿಕ್ಷುಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.