ಗುಜರಾತ್: ಗುಜರಾತ್, ಉತ್ತರಾಖಂಡ, ಹಿಮಾಚಲ ಪ್ರದೇಶ, ದಿಲ್ಲಿಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮಳೆಯಬ್ಬರ ಹೆಚ್ಚಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ದಿಢೀರ್ ಪ್ರವಾಹ ಮತ್ತು ಭೂಕುಸಿತದಿಂದ ಅಪಾರ ಹಾನಿಯಾಗಿದೆ.
ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 86ಕ್ಕೇರಿಕೆಯಾಗಿದೆ. ಹಿಮಾಚಲ ಮತ್ತು ಗುಜರಾತ್ನಲ್ಲಿ ಶನಿವಾರ ಮಳೆ ಸಂಬಂಧಿ ಘಟನೆಗಳಿಗೆ 7 ಮಂದಿ ಬಲಿಯಾಗಿದ್ದಾರೆ. ಹಿಮಾಚಲದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಐವರು ಮೃತಪಟ್ಟರೆ, ಗುಜರಾತ್ನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಪಂಜಾಬ್ ರಸ್ತೆ ಸಾರಿಗೆಯ ಬಸ್ಸೊಂದು ಮನಾಲಿಯ ಬಿಯಾಸ್ ನದಿಯ ಮಧ್ಯೆ ರವಿವಾರ ಪತ್ತೆಯಾಗಿದೆ. ಜು.9ರಂದು ಚಂಡೀಗಢದಿಂದ ಹೊರಟಿದ್ದ ಬಸ್ ಜು.10ರಂದು ಮನಾಲಿ ಸಮೀಪ ಪ್ರವಾಹದಲ್ಲಿ ಕೊಚ್ಚಿಹೋಗಿತ್ತು. ಇದೇ ವೇಳೆ ಉತ್ತರಾಖಂಡದಲ್ಲಿ ಜು. 26ರವರೆಗೂ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದ್ದು, ಎಲ್ಲ 13 ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಯಮುನೋತ್ರಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು 7 ರಾಜ್ಯಗಳಿಗೆ ಅಲರ್ಟ್ ಘೋಷಿಸಿದೆ. ಗುಜರಾತ್ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ 204.4 ಮಿ.ಮೀ. ಮಳೆಯಾಗುವ ಸಾಧ್ಯತೆಯಿದ್ದು,ಈ ಎರಡು ರಾಜ್ಯಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಮಧ್ಯಪ್ರದೇಶ, ಕರ್ನಾಟಕ, ಒಡಿಶಾ, ಗೋವಾ ಮತ್ತು ಕೇರಳಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ.