ಅಹಮದಾಬಾದ್: ವಿಶ್ವಕಪ್ ಟೂರ್ನಿಯ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಆರಂಭವಾಗಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
1.32 ಲಕ್ಷ ಸಾಮರ್ಥ್ಯ ಆಸನಗಳ ವ್ಯವಸ್ಥೆಯುಳ್ಳ ಮೋದಿ ಕ್ರೀಡಾಂಗಣಕ್ಕೆ ಜನಸಾಗರವೇ ಹರಿದುಬಂದಿದ್ದು, ಕ್ರೀಡಾಂಗಣದ ಹೊರಗೂ ಸಾವಿರಾರು ಅಭಿಮಾನಿಗಳು ಟೀಂ ಇಂಡಿಯಾವನ್ನು ಹುರಿದುಂಬಿಸುತ್ತಿದ್ದಾರೆ. ಈ ನಡುವೆ ಎದುರಾಳಿ ತಂಡದ ಆಟಗಾರರನ್ನೂ ವ್ಯಂಗ್ಯಮಾಡದಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸೂಚಿಸಿದ್ದಾರೆ.
ಟಾಸ್ ಬಳಿಕ ಈ ಕುರಿತು ಮಾತನಾಡಿರುವ ಗೌತಮ್ ಗಂಭೀರ್, ವಿಶ್ವಕಪ್ನಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿರುವ ಪಾಕಿಸ್ತಾನ ತಂಡಕ್ಕೆ ಅಗೌರವ ತೋರಬೇಡಿ. ನಿಮ್ಮ ತಂಡವನ್ನು ಬೆಂಬಲಿಸಿ, ಆದ್ರೆ ಪಾಕ್ ಜತೆ ಅನುಚಿತವಾಗಿ ವರ್ತಿಸಬೇಡಿ. ಅವರು ಇಲ್ಲಿಗೆ ವಿಶ್ವಕಪ್ ಆಡಲು ಬಂದಿದ್ದಾರೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.