ಅಯೋಧ್ಯೆ: ರಾಮಲಲ್ಲಾ ಪ್ರಾಣಪ್ರತಿಷ್ಠೆಯಾದ ಬೆನ್ನಲ್ಲೇ ಭಕ್ತರು ರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ಇದರಿಂದಾಗಿ ಅಲ್ಲಿನ ಊಟೋಪಚಾರ ಮತ್ತು ವಸತಿ ದುಬಾರಿಯಾಗುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ಅಯೋಧ್ಯೆಗೆ ಹೊದ ವ್ಯಕ್ತಿಯೊಬ್ಬ ಹಂಚಿಕೊಂಡ ಹೋಟೆಲ್ ನ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಿಂದ ನಾನಾರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ.
ತನ್ನ ಎಕ್ಸ್ ಖಾತೆಯಲ್ಲಿ ಅಯೋಧ್ಯೆಯ ಶಬರಿ ರಸೋಯಿಯ ಬಿಲ್ ನ ಫೋಟೋ ಹಂಚಿಕೊಂಡ ಗೋವಿಂದ್ ಪ್ರತಾಪ್ ಸಿಂಗ್ ಎನ್ನುವವರು ರಾಮನ ಹೆಸರಲ್ಲಿ ಲೂಟಿ ಎಂದು ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡ ಬಿಲ್ ಇದಕ್ಕೆ ಪುಷ್ಟಿಕೊಡುವಂತಿದ್ದು, ಒಂದು ಟೀಗೆ ೫೫ರೂ ಹಾಗು ಟೋಸ್ಟ್ ಗೆ ೬೫ರೂ ಎಂದು ಬರೆಯಲಾಗಿದೆ. ಇದು ಜ.೨೨ರ ಬಿಲ್ ಆಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಪೋಸ್ಟನ್ನು ಸುಮಾರು ೧ ಲಕ್ಷ ೬೩ ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ತೀರ್ಥಸ್ಥಾನವನ್ನು ಪ್ರವಾಸಿ ತಾಣವನ್ನಾಗಿಸಿದುದರ ಪರಿಣಾಮವಿದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.