ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ 65 ನೇ ಜನ್ಮದಿನ. ದ್ರೌಪದಿ ಮುರ್ಮು ಅವರು ಜುಲೈ 5, 2022 ರಂದು ಭಾರತದ 15ನೇ ರಾಷ್ಟ್ರಪತಿಯಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಮುರ್ಮು ಅವರು ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ವಹಿಸಿಕೊಂಡರು. ರಾಷ್ಟ್ರಪತಿ ಮುರ್ಮು ಅವರು ಮೃದು ಹಾಗೂ ವಿನಮ್ರ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ದೃಢ ಹಾಗೂ ಕಠಿಣ ಪರಿಶ್ರಮದಿಂದ ರಾಜಕೀಯಕ್ಕೆ ಕಾಲಿಟ್ಟರು.
ದ್ರೌಪದಿ ಮುರ್ಮು ಮಯೂರ್ಭಂಜ್ ಜಿಲ್ಲೆಯ ಉಪರಬೇಡ ಗ್ರಾಮದಲ್ಲಿ ಸಂತಾಲಿ ಬುಡಕಟ್ಟು ಕುಟುಂಬದಲ್ಲಿ 1958ರ ಜೂನ್ 20 ರಂದು ಜನಿಸಿದ ಮುರ್ಮು ಅವರು ಬ್ಯಾಂಕರ್ ಶ್ಯಾಮ್ ಚರಣ್ ಮುರ್ಮು ಅವರನ್ನು ವಿವಾಹವಾದರು, ಅವರು 2014 ರಲ್ಲಿ ನಿಧನರಾದರು. ಅವರ ಇಬ್ಬರು ಪುತ್ರರೂ ಕೂಡ ಮೃತಪಟ್ಟಿದ್ದಾರೆ. ಬಳಿಕ ಮಗಳಿಗೆ ಉತ್ತಮ ಶಿಕ್ಷಣವನ್ನು ಒದಗಿಸುವಲ್ಲಿ ಯಶಸ್ವಿಯಾದರು.
ಇನ್ನೂ ಬಿಜೆಪಿಯ ಸಿದ್ಧಾಂತಗಳಿಗೆ ಸರಿಯಾಗಿ ಒಗ್ಗುವ ಮಹಿಳೆ ಎನಿಸಿಕೊಂಡಿರುವ ದ್ರೌಪದಿ, ಪ್ರಸಿದ್ಧ ಬುಡಕಟ್ಟು ನಾಯಕಿ ಮಾತ್ರವಲ್ಲದೆ ಸಮರ್ಥ ಆಡಳಿತಗಾರರೂ ಆಗಿದ್ದಾರೆ, ಇದನ್ನು ಅವರು ಜಾರ್ಖಂಡ್ನ ರಾಜ್ಯಪಾಲರಾಗಿ ಅಧಿಕಾರಾವಧಿಯಲ್ಲಿ ಸಾಬೀತುಪಡಿಸಿದ್ದಾರೆ. ಜಾರ್ಖಂಡ್ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲೆ ಎನಿಸಿಕೊಂಡಿದ್ದರು. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮುರ್ಮು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದು, ‘ಬುದ್ಧಿವಂತಿಕೆ ಮತ್ತು ಘನತೆಯ ದಾರಿದೀಪ’ ಎಂದು ಬಣ್ಣಿಸಿದ್ದಾರೆ.
‘ರಾಷ್ಟ್ರಪತಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ಬುದ್ಧಿವಂತಿಕೆ, ಘನತೆ ಮತ್ತು ನಮ್ಮ ಜನರ ಕಲ್ಯಾಣಕ್ಕಾಗಿ ಬದ್ಧತೆಯ ದಾರಿದೀಪ, ರಾಷ್ಟ್ರದ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸುವ ಅವರ ಪ್ರಯತ್ನಗಳಿಗಾಗಿ ಅವರು ಮೆಚ್ಚುಗೆ ಪಡೆದಿದ್ದಾರೆ. ಅವರ ಸಮರ್ಪಣೆ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತಿದೆ. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹಾರೈಸುತ್ತೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ರಾಜಕೀಯ ನಾಯಕರು, ಆಪ್ತ ವಲಯದವರು ಹಾಗೂ ಅವರ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.