ನವದೆಹಲಿ: ದೇಶದ 75 ವರ್ಷಗಳ ಸ್ವಾತಂತ್ರ್ಯ ಸ್ಮರಣೆಗಾಗಿ ಕೇಂದ್ರ ಸರ್ಕಾರ ಆರಂಭಿಸಿದ ಅಮೃತ ಮಹೋತ್ಸವದ ಜತೆಗೇ 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಮೇರಿ ಮಾಟಿ ಮೇರಾ ದೇಶ್ ಅಭಿಯಾನವನ್ನು ಆರಂಭಿಸಿದೆ.
ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ದೇಶದ ಹುತಾತ್ಮರ ಬಗ್ಗೆ ಕೇಂದ್ರೀಕೃತವಾಗಿರುವ ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮಗಳನ್ನು ದೇಶದಾದ್ಯಂತ ಆಯೋಜಿಸಲಾಗುವುದು.
ಪ್ರತಿ ಗ್ರಾಪಂಗಳಲ್ಲಿ ವೀರ ಯೋಧರ ಸ್ಮರಣೆ: ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಸ್ತುತ ಇರುವ ಅಮೃತ್ ಮಹೋತ್ಸವದ ಆಚರಣೆಗಳೊಂದಿಗೆ ಹುತಾತ್ಮರಾದ ವೀರ ಪುರುಷ ಮತ್ತು ಮಹಿಳೆಯರನ್ನು ಗೌರವಿಸುವ ದ ‘ಮೇರಿ ಮಾಟಿ ಮೇರಾ ದೇಶ್’ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು.
ಈ ಅಭಿಯಾನದ ಭಾಗವಾಗಿ, ನಮ್ಮ ಅಮರ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಷ್ಟ್ರದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅವರ ಸ್ಮರಣೆಯನ್ನು ಅಜರಾಮರಗೊಳಿಸಲು, ದೇಶದಾದ್ಯಂತ ಲಕ್ಷಾಂತರ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಶಾಸನಗಳನ್ನು ಸ್ಥಾಪಿಸಲಾಗುವುದು.
ಅಮೃತ ಕಲಶ ಯಾತ್ರೆ: ಈ ಅಭಿಯಾನವು ದೇಶಾದ್ಯಂತ ‘ಅಮೃತ ಕಲಶ ಯಾತ್ರೆ’ಗೆ ಸಾಕ್ಷಿಯಾಗಲಿದೆ, ಇದು ಭಾರತದ ಮೂಲೆ ಮೂಲೆಯಿಂದ ದೆಹಲಿಗೆ 7500 ಕಲಶಗಳಲ್ಲಿ ಮಣ್ಣನ್ನು ಸಾಗಿಸುತ್ತದೆ. ಈ ಪ್ರಯಾಣದಲ್ಲಿ ಮಣ್ಣಿನ ಜೊತೆಗೆ ದೇಶದ ವಿವಿಧ ಪ್ರದೇಶಗಳ ಸಸಿಗಳನ್ನೂ ಒಯ್ಯಲಾಗುವುದು. ಈ ಎರಡೂ ಅಂಶಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ‘ಅಮೃತ ವಾಟಿಕಾ’ ರಚಿಸಲು ಬಳಸಲಾಗುತ್ತದೆ.