ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಬಗ್ಗೆ ಬಹುದೊಡ್ಡ ಆರೋಪವೊಂದು ಕೇಳಿಬಂದಿತ್ತು. ಉದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಶ್ನೆ ಕೇಳುವುದಕ್ಕೆ ಪ್ರತಿಯಾಗಿ ಭಾರಿ ಮೊತ್ತದ ಹಣ ಹಾಗೂ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು.
ಇದೀಗ ಆ ಆರೋಪವನ್ನು ಸಂಸದೆ ಮಹುವಾ ಮೊಯಿತ್ರಾ ತಳ್ಳಿ ಹಾಕಿದ್ದು, ಪ್ರಶ್ನೆ ಕೇಳುವುದಕ್ಕೆ “ಹಣ” ನೀಡುವ ಬದಲು “ಪ್ರಶ್ನೆ ಮಾಡದಿರಲು ಹಣ ನೀಡಲು ಬಂದಿದ್ದರು ಎಂದು ಹೇಳಿದ್ದಾರೆ. ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಂಧಾನಕಾರರಾಗಿ ಕಳೆದ ಮೂರು ವರ್ಷಗಳಲ್ಲಿ ಇಬ್ಬರು ಸಂಸದರು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಟಿಎಂಸಿ ಸಂಸದೆ ಹೇಳಿದ್ದಾರೆ.
“ಕಳೆದ ಮೂರು ವರ್ಷಗಳಲ್ಲಿ ಇಬ್ಬರು ಲೋಕಸಭಾ ಸಂಸದರ ಮೂಲಕ ಅದಾನಿ ಅವರು ನನ್ನನ್ನು ಸಂಪರ್ಕಿಸಿದ್ದು, ಕುಳಿತು ಮಾತನಾಡಿ ಒಂದು ಒಪ್ಪಂದಕ್ಕೆ ಬರುವಂತೆ ಕೇಳಿಕೊಂಡಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದೇನೆ. ಅವರು ಪ್ರಶ್ನಿಸದಿರಲು ಹಣ ನೀಡಲು ಬಂದಿದ್ದರು ” ಎಂದು ಮಹುವಾ ಹೇಳಿದ್ದಾರೆ. ಆದರೆ ತಮ್ಮನ್ನು ಸಂಪರ್ಕಿಸಿದ ಸಂಸದರ ಹೆಸರನ್ನು ಹೇಳಲು ನಿರಾಕರಿಸಿದ್ದಾರೆ.
ಕಳೆದ ವಾರ ಸಹ ಚುನಾವಣೆ ಮುಗಿಯುವವರೆಗೆ, ಆರು ತಿಂಗಳ ಕಾಲ ಮೌನವಾಗಿರುವಂತೆ ನನಗೆ ಸಂದೇಶ ಕಳುಹಿಸಿದ್ದಾರೆ ಎಂದು ಟಿಎಂಸಿ ಸಂಸದೆ ತಿಳಿಸಿದ್ದಾರೆ.