ನವದೆಹಲಿ: ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಒತ್ತಾಯಿಸುವ ಸಂಬಂಧ ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಸದಸ್ಯರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಮೂಲಗಳ ಪ್ರಕಾರ, ಇಂಡಿಯಾ ಒಕ್ಕೂಟ ಲೋಕಸಭೆಯಲ್ಲಿ ಅವಿಶ್ವಾಸ ಮಂಡನೆ ನಿರ್ಧರಿಸಿವೆ. ಈ ನಿಟ್ಟಿನಲ್ಲಿ ಖರ್ಗೆ ಅವರೊಂದಿಗಿನ ಸಭೆಯಲ್ಲಿ ಆರ್ಜೆಡಿ, ಎಎಪಿ, ತೃಣಮೂಲ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.
ಸಭೆ ಬಳಿಕ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದು, 83 ದಿನಗಳಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ.
ಈ ಸಂಬಂಧ ಪ್ರಧಾನಿ ಸಮಗ್ರ ಹೇಳಿಕೆ ನೀಡಬೇಕಿದೆ. ದೇಶದ ಜನರು ಪ್ರಧಾನಿ ಅವರಿಂದ ಉತ್ತರ ಬಯಸಿದ್ದಾರೆ ಎಂದು ಹೇಳಿದ್ದಾರೆ. ಮಣಿಪುರದ ಭಯಾನಕ, ಬೀಭತ್ಸ ಘಟನೆಗಳು ಒಂದೊಂದಾಗಿಯೇ ಹೊರಬರುತ್ತಿವೆ. ಗಡಿಪ್ರದೇಶದಲ್ಲಿ ಇಂತಹ ಅಶಾಂತಿಯ ವಾತಾವರಣ ಒಳ್ಳೆಯದಲ್ಲ. ಪ್ರಧಾನಿ ಮೋದಿ ಅವರು ಅಹಂಕಾರ ತೊರೆದು ಮಣಿಪುರದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.