ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ವೇಳೆ ಮಾತನಾಡಿದರು. ಈ ವೇಳೆ ದೇಶದ ಆರ್ಥಿಕತೆ ಬೆಳವಣಿಗೆಯನ್ನು ಶ್ಲಾಘಿಸಿದರು, ಜಾಗತಿಕ ಆರ್ಥಿಕತೆಯು ಏರಿಳಿತ ಕಂಡು ಹೆಣಗಾಡುತ್ತಿದೆ. ಆದರೆ ಭಾರತ ಆರ್ಥಿಕವಾಗಿ ಸದೃಢವಾಗಿದೆ ಎಂದರು.
ಅದೇ ರೀತಿ ಟೊಮೆಟೊ ಸೇರಿದಂತೆ ಆಹಾರ ವಸ್ತುಗಳ ದರ ನಿಯಂತ್ರಣಕ್ಕೆ ಸರ್ಕಾರದ ಕ್ರಮಗಳನ್ನು ವಿವರಿಸಿದರು. ತೊಗರಿ ಬೇಳೆಯನ್ನು ಮೊಜಾಂಬಿಕ್ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಉದ್ದಿನ ಬೇಳೆಯನ್ನು ಮ್ಯಾನ್ಮಾರ್ನಿಂದ ತರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಬಫರ್ ಸ್ಟಾಕ್ ಗಾಗಿ ಸುಮಾರು ಮೂರು ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹಿಸಲಾಗಿದೆ ಎಂದು ಎಂಎಸ್ ಸೀತಾರಾಮನ್ ತಿಳಿಸಿದರು.
ಕೇಂದ್ರ ಸರ್ಕಾರವು ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಟೊಮೆಟೊ ಖರೀದಿಸಿ ರಾಷ್ಟ್ರ ರಾಜಧಾನಿ, ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಲ್ಲಿ ವಿತರಿಸುತ್ತಿದೆ. ಇದೇ ಕಾರಣದಿಂದ ದೆಹಲಿ-ಎನ್ಸಿಆರ್ನಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ ₹ 70 ಕ್ಕೆ ಇಳಿಯಲಿದೆ ಎಂದು ಭರವಸೆ ನೀಡಿದರು.
ಮುಂಬರುವ ವಾರಾಂತ್ಯದಲ್ಲಿ, ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ಪ್ರತಿ ಕೆಜಿಗೆ ₹ 70 ಸಬ್ಸಿಡಿ ದರದಲ್ಲಿ ಟೊಮೆಟೊ ಮೆಗಾ ಮಾರಾಟ ಮೇಳ ಆಯೋಜಿಸಲಾಗುತ್ತದೆ ಎಂದರು. ನೇಪಾಳದಿಂದ ಟೊಮೆಟೊ ಆಮದಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಟೊಮೆಟೊ ಲಕ್ನೋ, ವಾರಣಾಸಿ, ಕಾನ್ಪುರದಂತಹ ನಗರಗಳನ್ನು ಶೀಘ್ರದಲ್ಲೇ ತಲುಪಲಿದೆ ಎಂದರು.