ನವದೆಹಲಿ: ಸಂಸತ್ ಭದ್ರತಾ ಲೋಪ ಖಂಡಿಸಿ ಕಲಾಪಕ್ಕೆ ಅಡ್ಡಿಪಡಿಸಿದ ಮೂವರು ಕಾಂಗ್ರೆಸ್ ಸಂಸದರಾದ ಡಿ. ಕೆ ಸುರೇಶ್, ದೀಪಕ್ ಬೈಜ್ ಮತ್ತು ನಕುಲ್ ನಾಥ್ ಅವರನ್ನು ಗುರುವಾರ ಚಳಿಗಾಲದ ಅಧಿವೇಶನದ ಉಳಿದ ಭಾಗಕ್ಕೆ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ.
ಈ ಮೂಲಕ ಅಮಾನತುಗೊಂಡ ಸಂಸದರ ಸಂಖ್ಯೆ 146ಕ್ಕೆ ಏರಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಡಿ ಕೆ ಸುರೇಶ್, ದೀಪಕ್ ಬೈಜ್ ಮತ್ತು ನಕುಲ್ ನಾಥ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾಪ ಮಂಡಿಸಿದರು.
ದೀಪಕ್ ಬೈಜ್, ಡಿ ಕೆ ಸುರೇಶ್, ನಕುಲ್ ನಾಥ್ ಅವರು ಸದನದ ಬಾವಿಗೆ ಇಳಿದು ಸದನದಲ್ಲಿ ಫಲಕಗಳನ್ನು ಪ್ರದರ್ಶಿಸುವ ಮೂಲಕ ಅಶಿಸ್ತಿನಿಂದ ವರ್ತಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಈ ಸದನ ಅವರನ್ನು ಸದನದಿಂದ ಅಮಾನತುಗೊಳಿಸಬಹುದು ಎಂದು ಜೋಶಿ ಹೇಳಿದರು.
ಇದುವರೆಗೆ ಲೋಕಸಭೆಯಿಂದ 100 ಸಂಸದರನ್ನು ಹಾಗೂ ರಾಜ್ಯಸಭೆಯಿಂದ 46 ಸಂಸದರನ್ನು ಅಮಾನತುಗೊಳಿಸಲಾಗಿದೆ.