ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿಯಡಿ ಸಂಸ್ಥೆಗೆ ನಿಗದಿಪಡಿಸಿದ ಐದು ಚಿಲ್ಲರೆ ವಲಯಗಳಿಗಾಗಿ ಆಮ್ ಆದ್ಮಿ ಪಕ್ಷಕ್ಕೆ 25 ಕೋಟಿ ರೂಪಾಯಿ ನೀಡುವಂತೆ ಅರಬಿಂದೋ ಫಾರ್ಮಾ ಪ್ರಮೋಟರ್ ಶರತ್ ಚಂದ್ರ ರೆಡ್ಡಿ ಅವರಿಗೆ ಬಿಆರ್ಎಸ್ ನಾಯಕಿ ಕೆ.ಕವಿತಾ ಬೆದರಿಕೆ ಹಾಕಿದ್ದರು ಎಂದು ಸಿಬಿಐ ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.
ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಪಿಎಂಎಲ್ಎ ಪ್ರಕರಣದಡಿ ಆರೋಪಿಯಾಗಿದ್ದ ರೆಡ್ಡಿ, ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿದ್ದರು. ಅವರ ವಿರುದ್ಧ ಸಿಬಿಐ ಇನ್ನೂ ಆರೋಪ ಪಟ್ಟಿ ಸಲ್ಲಿಸಿಲ್ಲ. ಕವಿತಾ ಅವರನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸಲು ಕೋರಿದ ಸಿಬಿಐ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರನ್ನು ಕೋರಿದೆ. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರುವ ಕವಿತಾ ಅವರ ಒತ್ತಾಯ ಮತ್ತು ಭರವಸೆಯಿಂದಲೇ ರೆಡ್ಡಿ ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ವ್ಯವಹಾರದಲ್ಲಿ ಭಾಗವಹಿಸಿದ್ದಾರೆ ಎಂದು ಸಿಬಿಐ ದೂರಿದೆ.
ದೆಹಲಿ ಸರ್ಕಾರದಲ್ಲಿ ತನಗೆ ಸಂಪರ್ಕವಿದೆ ಮತ್ತು ಹೊಸ ಅಬಕಾರಿ ನೀತಿಯ ಅಡಿಯಲ್ಲಿ ದೆಹಲಿಯಲ್ಲಿ ಮದ್ಯದ ವ್ಯವಹಾರದಲ್ಲಿ ರೆಡ್ಡಿಗೆ ಸಹಾಯ ಮಾಡುವುದಾಗಿ ಕವಿತಾ ಭರವಸೆ ನೀಡಿದ್ದರು ಎನ್ನಲಾಗಿದೆ. “ಮದ್ಯದ ವ್ಯಾಪಾರವನ್ನು ಪಡೆಯಲು ಸಗಟು ವ್ಯಾಪಾರಕ್ಕೆ 25 ಕೋಟಿ ರೂಪಾಯಿ ಮತ್ತು ಪ್ರತಿ ಚಿಲ್ಲರೆ ವಲಯಕ್ಕೆ 5 ಕೋಟಿ ರೂಪಾಯಿಗಳ ಮುಂಗಡ ಹಣದ ಪಾವತಿಯನ್ನು ಆಮ್ ಆದ್ಮಿ ಪಕ್ಷಕ್ಕೆ ಮಾಡಲಾಗುವುದು ಎಂದು ಕವಿತಾ, ಶರತ್ ಚಂದ್ರ ರೆಡ್ಡಿಗೆ ತಿಳಿಸಿದ್ದರು.
ಆಕೆಯ ಸಹಚರರಾದ ಅರುಣ್ ಆರ್. ಪಿಳ್ಳೈ ಮತ್ತು ಅಭಿಷೇಕ್ ಬೋಯಿನ್ಪಲ್ಲಿ ಅವರಿಗೆ ಇದನ್ನು ಪಾವತಿಸಲಾಗಿದೆ. ಅವರು ಅರವಿಂದ್ ಕೇಜ್ರಿವಾಲ್ ಅವರ ಪ್ರತಿನಿಧಿಯಾಗಿದ್ದ ವಿಜಯ್ ನಾಯರ್ ಅವರೊಂದಿಗೆ ಸಮನ್ವಯ ಸಾಧಿಸಿದ್ದರು,” ಎಂದು ಸಿಬಿಐ ಆರೋಪಿಸಿದೆ.
2021ರ ಜುಲೈನಲ್ಲಿ 7 ಕೋಟಿ ಮತ್ತು 2021ರ ನವೆಂಬರ್ ಮಧ್ಯದಲ್ಲಿ ಏಳು ಕೋಟಿ ರೂ.ಗಳನ್ನು ಬ್ಯಾಂಕ್ ವಹಿವಾಟಿನ ಮೂಲಕ ಆಕೆಗೆ ಒಟ್ಟು 14 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದು ಸಿಬಿಐ ಹೇಳಿದೆ. 2021ರ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ರೆಡ್ಡಿ ಅವರಿಗೆ ಮಂಜೂರು ಮಾಡಿದ ಐದು ಚಿಲ್ಲರೆ ವಲಯಗಳಿಗೆ ಪ್ರತಿ ವಲಯಕ್ಕೆ ಐದು ಕೋಟಿ ರೂಪಾಯಿಗಳಂತೆ 25 ಕೋಟಿ ರೂಪಾಯಿಗಳನ್ನು ಪಾವತಿಸುವಂತೆ ಕವಿತಾ ರೆಡ್ಡಿ ಅವರನ್ನು ಒತ್ತಾಯಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.