ದೆಹಲಿ: ಸಂಸತ್ ವಿಶೇಷ ಅಧಿವೇಶನ 4ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಅನೇಕ ವಿಚಾರಗಳ ಬಗ್ಗೆ ಚರ್ಚೆಗಳ ನಡೆದಿದೆ. ಈ ಸಮಯದಲ್ಲಿ ಬಿಜೆಪಿಯ ಸಂಸದರೊಬ್ಬರು ಎಡವಟ್ಟು ಮಾಡಿಕೊಂಡಿದ್ದಾರೆ. ಮಾತಿನ ಭರದಲ್ಲಿ ಕೋಮು ದೂಷಣೆಯನ್ನು ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಸಂಸತ್ತಿನಲ್ಲಿ ಆಡಳಿತ ಪಕ್ಷದ ಸಂಸದರೊಬ್ಬರು ಮುಸ್ಲಿಂ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸಂಸದ ಕುನ್ವರ್ ಡ್ಯಾನಿಶ್ ಅಲಿ ವಿರುದ್ಧ ಗುಡುಗಿದ್ದು, ಕುನ್ವರ್ ಡ್ಯಾನಿಶ್ ಅಲಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ.
ಚಂದ್ರಯಾನ-3 ಯಶಸ್ವಿನ ಮೇಲೆ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಡ್ಯಾನಿಶ್ ಅಲಿಯನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ. ಇನ್ನು ಬಿಜೆಪಿ ಸಂಸದರ ಈ ಹೇಳಿಕೆಯು ಎಕ್ಸ್ ನಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಬಿಎಸ್ಪಿ ಸಂಸದರು, ರಮೇಶ್ ಬಿಧುರಿ ವಿರುದ್ಧ ಕೂಗುವುದನ್ನು ಕಾಣಬಹುದು. ರಮೇಶ್ ಬಿಧುರಿ ಹಿಂದೆ ಕುಳಿತುಕೊಂಡಿದ್ದ ಅವರದೇ ಪಕ್ಷದ ಸಂಸದರಿಬ್ಬರು ಮತ್ತು ಮಾಜಿ ಸಚಿವರಾದ ರವಿಶಂಕರ್ ಪ್ರಸಾದ್ ಮತ್ತು ಹರ್ಷವರ್ಧನ್ ನಗುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ವಿಡಿಯೋದಲ್ಲಿ “ಈ ‘ಮುಲ್ಲಾ’ ನ್ನು ಹೊರಗೆ ಎಸೆಯಿರಿ. “ಈ ಮುಲ್ಲಾ ಒಬ್ಬ ಭಯೋತ್ಪಾದಕ” ಎಂದು ಸಂಸದರು ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಕಾಣಬಹುದು.
ಈ ಸಂದರ್ಭದಲ್ಲಿ ರಮೇಶ್ ಬಿಧುರಿ ಅವರನ್ನು ಕುಳಿತುಕೊಳ್ಳುವಂತೆ ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತುಕೊಂಡಿದ್ದ, ಕಾಂಗ್ರೆಸ್ ಪಕ್ಷದ ಸಂಸದ ಕೋಡಿಕುನ್ನಿಲ್ ಸುರೇಶ್ ಅವರು ಹೇಳುತ್ತಾರೆ. ಅದರೂ ರಮೇಶ್ ಬಿಧುರಿ ತಮ್ಮ ಮಾತು ನಿಲ್ಲಿಸದೆ ಸಂಸದ ಕುನ್ವರ್ ಡ್ಯಾನಿಶ್ ಅಲಿ ವಿರುದ್ಧ ವಾಗ್ದಾಳಿ ಮುಂದುವರಿಸುತ್ತಾರೆ.