ನವದೆಹಲಿ: ಕೇಂದ್ರ ಸಚಿವೆ ಮತ್ತು ಬಿಜೆಪಿ ಸಂಸದೆ ಸ್ಮೃತಿ ಇರಾನಿ ಬುಧವಾರ ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ಹಿಂದೆ ನಡೆದ ಹಲವಾರು ಹಿಂಸಾಚಾರ ಘಟನೆಗಳನ್ನು ಉಲ್ಲೇಖಿಸಿ ಕೈ ನಾಯಕರ ವಿರುದ್ಧ ಹರಿಹಾಯ್ದರು.
ರಾಹುಲ್ ಗಾಂಧಿ ಅವರ ಭಾಷಣದ ನಂತರ ಅವಿಶ್ವಾಸ ನಿರ್ಣಯದ ವಿರುದ್ಧ ಮಾತನಾಡಿದ ಅವರು, ಎಲ್ಲಾ ಸಮಸ್ಯೆಗಳ ತಿರುಳು ವಂಶಪಾರಂಪರ್ಯ ರಾಜಕೀಯ. 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ವಿರುದ್ಧ ನಡೆದ ಹಿಂಸಾಚಾರ, 1984 ರ ಸಿಖ್ ವಿರೋಧಿ ದಂಗೆ, ಅಸ್ಸಾಂ ಹಿಂಸಾಚಾರ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧದ ಇತ್ತೀಚಿನ ಹಿಂಸಾಚಾರದ ಘಟನೆಗಳನ್ನು ಪಟ್ಟಿ ಮಾಡಿದಲ್ಲಿ ಎಲ್ಲಾ ಸಮಸ್ಯೆಗಳ ತಿರುಳು ವಂಶಪಾರಂಪರ್ಯ ರಾಜಕೀಯ ಎಂಬುದು ಎಲ್ಲರಿಗೂ ತಿಳಿಯುತ್ತದೆ ಎಂದರು.
ಭಾರತದ ಬಗ್ಗೆ ಮಾತನಾಡುವವರು ಕಾಶ್ಮೀರಿ ಪಂಡಿತರು ಮತ್ತು ಸಿಖ್ ವಿರೋಧಿ ದಂಗೆಯ ಸಂತ್ರಸ್ತರ ಧ್ವನಿಯನ್ನು ಎಂದಿಗೂ ಕೇಳಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಎಂದಿಗೂ ಭಾರತದ ಜನರು, ರೈತರು, ಯುವಕರು, ಹಿಂದೂಗಳು, ಮುಸ್ಲಿಮರು ಮತ್ತು ಮಹಿಳೆಯರೊಂದಿಗೆ ಇರಲಿಲ್ಲ, ಸರ್ಜಿಕಲ್ ಸ್ಟ್ರೈಕ್ ನಂತರ ರಕ್ಷಣಾ ಪಡೆಗಳಿಂದ ಪುರಾವೆಗಳನ್ನು ಕೋರಿದ ಪಕ್ಷ ಕಾಂಗ್ರೆಸ್. 2024 ರಲ್ಲಿ ನರೇಂದ್ರ ಮೋದಿ ಮತ್ತೆ ಜನರ ಸೇವೆ ಮಾಡಲು ಬರುತ್ತಾರೆ ಎಂಬುದನ್ನು ಕಾಂಗ್ರೆಸ್ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
“ಮಣಿಪುರದಲ್ಲಿ ಭಾರತ ಮಾತೆಯನ್ನು ಸರ್ಕಾರ ಹತ್ಯೆ ಮಾಡುತ್ತಿದೆ” ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಖಂಡಿಸಿದ ಇರಾನಿ, ರಾಹುಲ್ ಗಾಂಧಿ ಅವರ ‘ಭಾರತ್ ಮಾತಾ’ ಹೇಳಿಕೆಗೆ ಚಪ್ಪಾಳೆ ತಟ್ಟುತ್ತಿರುವವರು ದೇಶ ವಿರೋಧಿಗಳು ಎಂದು ಹೇಳಿದರು.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಬಗ್ಗೆ ಪ್ರತಿಕ್ರಿಯಿಸಿದ ಇರಾನಿ, ಅವರು 50 ವರ್ಷ ವಯಸ್ಸಿನ ನಂತರ ಭಾರತವನ್ನು ನೋಡಲು ಪ್ರವಾಸಕ್ಕೆ ಹೋಗಿದ್ದರು, ಇದು ಅವರು ಭಾರತದ ಕಲ್ಪನೆಯೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ತೋರಿಸುತ್ತದೆ ಎಂದು ಹೇಳಿದರು.
ರಾಹುಲ್ ಗಾಂಧಿ ವಿದೇಶದಲ್ಲಿ ಮಾಡಿದ ಭಾಷಣಗಳನ್ನು ಟೀಕಿಸಿದ ಇರಾನಿ, ಭಾರತದಲ್ಲಿ ಧ್ರುವೀಕರಣ ಹೆಚ್ಚುತ್ತಿದೆ ಮತ್ತು ಭಾರತೀಯರು ಸಾಮರಸ್ಯದಿಂದ ಬದುಕುತ್ತಿಲ್ಲ ಎಂದು ಅವರು ವಿದೇಶಗಳಲ್ಬಲಿ ಹಿರಂಗವಾಗಿ ಹೇಳಿದ್ದಾರೆ ಎಂದರು.