ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಗೆ ಪ್ರಿಯಾಂಕಾ ಗಾಂಧಿ ವಾದ್ರಾ ನಾಯಕಿಯಾಗುವುದು ಸೂಕ್ತ ಎಂದು ಸಿ ವೋಟರ್ ಸಮೀಕ್ಷೆ ಹೇಳಿದೆ.
4,029 ಜನರ ಅಭಿಪ್ರಾಯ ಸಂಗ್ರಹದಲ್ಲಿ ಈ ಅಂಶ ಬಹಿರಂಗವಾಗಿದೆ. ರಾಹುಲ್ ಗಾಂಧಿ ಸಂಸತ್ ಸ್ಥಾನ ಅಮಾನತುಗೊಂಡಿರುವ ಕಾರಣ ಪ್ರಿಯಾಂಕಾ ಗಾಂಧಿಯೇ ಪ್ರತಿಪಕ್ಷಗಳ ಮುಖವಾಣಿಯಾಗುವುದು ಸೂಕ್ತ ಎಂದು ಹೆಚ್ಚಿನ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದೇರೀತಿ ಎಎಪಿ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರತಿಪಕ್ಷಗಳ ನಾಯಕರಾಗಬೇಕೆಂದು ಶೇ. 13.9 ಜನರು ಬಯಸಿದ್ದಾರೆ. ಜೆಡಿಯು ನಾಯಕ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಶೇ 13.6 ಜನರು ಪ್ರತಿಪಕ್ಷಗಳ ನಾಯಕನಾಗಿ ಬಯಸಿದ್ದಾರೆ. ಶೇ 10.4 ಮಂದಿ ಟಿಎಂಸಿ ಸಂಸ್ಥಾಪಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಈ ಸ್ಥಾನವನ್ನು ಹೊತ್ತುಕೊಳ್ಳಬೇಕು ಎಂದು ಬಯಸಿದ್ದಾರೆ. ಶೇ 30 ಪ್ರತಿಶತದಷ್ಟು ಜನರು ಈ ವಿಷಯದ ಬಗ್ಗೆ ತಮಗೆ ತಿಳಿದಿಲ್ಲ ಅಥವಾ ಹೇಳಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ.
2024 ರ ಲೋಕಸಭಾ ಚುನಾವಣೆಯಲ್ಲಿ ಸಂಯುಕ್ತ ವಿರೋಧ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರೆಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ರಾಹುಲ್ ಗಾಂಧಿ ಆ ಹೊಣೆ ಹೊತ್ತು ಕೊಳ್ಳಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಅದೇರೀತಿ ಭಾರತ್ ಜೋಡೋ ಯಾತ್ರೆ ಯಶಸ್ಸಿನ ಬಳಿಕ ಈ ಅಭಿಮತಕ್ಕೆ ಹೆಚ್ಚಿನ ಜನರು ಒತ್ತು ನೀಡುತ್ತಿದ್ದಾರೆ. ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ನ ಸೂರತ್ನಲ್ಲಿರುವ ವಿಚಾರಣಾ ನ್ಯಾಯಾಲಯವು ಅವರನ್ನು ತಪ್ಪಿತಸ್ಥರೆಂದು ಘೋಷಿಸಿಸಿದ್ದು, 2 ವರ್ಷಗಳ ಜೈಲು ಶಿಕ್ಷೆ ಘೋಷಿಸಿದ್ದು ಈ ನಿಟ್ಟಿನಲ್ಲಿ ಹಿನ್ನಡೆಯಾಗಿದೆ.
ಈ ಪ್ರಕಾರಣ ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಲಾಗಿದ್ದು, ಎಂಟು ವರ್ಷಗಳವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಜುಲೈ 16, 2023 ರಂದು, ರಾಹುಲ್ ಗಾಂಧಿ ಅವರು ಎರಡು ವರ್ಷಗಳ ಶಿಕ್ಷೆಗೆ ತಡೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.