ನವದೆಹಲಿ: ಕತಾರ್ ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳನ್ನು ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಭೇಟಿಯಾಗಿದ್ದಾರೆ.
ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿದ್ದು ನಮ್ಮ ರಾಯಭಾರಿ ಡಿಸೆಂಬರ್ 3 ರಂದು ಜೈಲಿನಲ್ಲಿರುವ ಎಲ್ಲಾ ಎಂಟು ಜನರನ್ನು ಭೇಟಿಯಾದರು ಎಂದು ಹೇಳಿದ್ದಾರೆ. ಪ್ರಕರಣ ಕುರಿತು ನಡೆಯುತ್ತಿರುವ ಮೇಲ್ಮನವಿ ವಿಚಾರಣೆಗೆ ಸಂಬಂಧಿಸಿದಂತೆ ಮಾತನಾಡಿ ಇದುವರೆಗೆ ಎರಡು ವಿಚಾರಣೆಗಳು ನಡೆದಿವೆ.
ನಾವು ವಿಷಯವನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ಎಲ್ಲಾ ಕಾನೂನು ಮತ್ತು ದೂತಾವಾಸದ ಸಹಾಯವನ್ನು ನೀಡುತ್ತಿದ್ದೇವೆ. ಇದು ಸೂಕ್ಷ್ಮ ಸಮಸ್ಯೆ, ಆದರೆ ನಾವು ಏನು ಮಾಡಬಹುದೋ ಅದನ್ನು ಮಾಡುತ್ತೇವೆ. ಮುಂದಿನ ವಿಚಾರಣೆ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಆಗಸ್ಟ್ನಲ್ಲಿ ಕತಾರ್ ಗುಪ್ತಚರ ಸಂಸ್ಥೆಯು ಗೂಢಚಾರಿಕೆ ನಡೆಸಿದ ಆರೋಪದಲ್ಲಿ 8 ಅಧಿಕಾರಿಗಳನ್ನು ಬಂಧಿಸಿತ್ತು.
ಕತಾರ್ ಆಡಳಿತದ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿದ್ದು, ಭಾರತೀಯ ಸಮುದಾಯದ ಯೋಗಕ್ಷೇಮದ ಕುರಿತು ಅವರು ಸಂವಾದ ನಡೆಸಿದ್ದಾರೆ ಎಂದು ಬಾಗ್ಚಿ ಹೇಳಿದ್ದಾರೆ.