ನವದೆಹಲಿ: ಭಾರತದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಬ್ರಿಟನ್ನಲ್ಲಿರುವ ಭಾರತದ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಹೇಳಿದ್ದಾರೆ. ವಿಶೇಷವಾಗಿ ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ನನ್ನು ಬಂಧಿಸುವ ಪ್ರಯತ್ನಕ್ಕೆ ಸಂಬಂಧಿಸಿದಂತೆ ಕಪೋಲಕಲ್ಪಿತ ವರದಿಗಳು ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ ಎಂದು ಅವರು ಹೇಳಿದ್ದಾರೆ.
ಪಂಜಾಬ್ ಪ್ರಜೆಗಳು ಸುರಕ್ಷಿತವಾಗಿದ್ದಾರೆ. ಯಾವುದೇ ಊಹಾಪೋಹಗಳನ್ನು ನಂಬಬೇಡಿ ಎಂದು ಯುಕೆಯಲ್ಲಿರುವ ಪಂಜಾಬ್ ಭಾಷಿಗರನ್ನು ಕೇಳಿಕೊಂಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ದೂರದರ್ಶನ ಸಂದರ್ಶನ ಸೇರಿದಂತೆ ಘಟನೆ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ದಯವಿಟ್ಟು ಇವುಗಳನ್ನು ವೀಕ್ಷಿಸಿ, ಬೆರಳೆಣಿಕೆಯಷ್ಟು ಜನರು ಪಸರಿಸುತ್ತಿರುವ ತಪ್ಪು ಮಾಹಿತಿಗಳನ್ನು ನಂಬಬೇಡಿ ಎಂದು ವಿಡಿಯೋ ಸಂದೇಶದಲ್ಲಿ ದೊರೈಸ್ವಾಮಿ ತಿಳಿಸಿದ್ದಾರೆ.