ನವದೆಹಲಿ: ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಘೋಷಿಸಿದ್ದ ಪಿಎಂ ವಿಶ್ವಕರ್ಮ ಯೋಜನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಇಂದು (ಆ.16) ಅನುಮೋದನೆ ನೀಡಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಿಎಂ ವಿಶ್ವಕರ್ಮ ಯೋಜನೆಯಿಂದ ದೇಶದ 30 ಲಕ್ಷ ಕರಕುಶಲಕರ್ಮಿಗಳಿಗೆ ಲಾಭವಾಗಲಿದೆ. ಇವರಿಗೆ ಕೇವಲ 5 ಪರ್ಸೆಂಟ್ ವಾರ್ಷಿಕ ಬಡ್ಡಿದರದಲ್ಲಿ 1 ಲಕ್ಷ ರೂವರೆಗೂ ಮೊದಲ ಹಂತದ ಸಾಲ ಕೊಡುವ ಯೋಜನೆ ಇದು. ಮುಂದಿನ 5 ವರ್ಷಗಳಿಗೆ ಈ ಯೋಜನೆಗೆಂದು ಸರ್ಕಾರ 13,000 ಕೋಟಿ ರೂ ಹಣ ಮಿಸಲಿಟ್ಟಿದೆ.
ಶಿಲ್ಪಿಗಳು, ಅಕ್ಕಸಾಲಿಗರು, ಚಮ್ಮಾರರು, ಮರಗೆಲಸದವರು, ದೋಣಿ ತಯಾರಕರು, ಬೀಗ ತಯಾರಕರು, ಕಮ್ಮಾರರು, ಕುಂಬಾರರು, ಗಾರೆ ಕೆಲಸದವರು ಮೊದಲಾದವರು ಪಿಎಂ ವಿಶ್ವಕರ್ಮ ಯೋಜನೆಗೆ ಫಲಾನುಭವಿಗಳಾಗಲು ಅರ್ಹರಿರುತ್ತಾರೆ.