ನವದೆಹಲಿ: ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಕುರಿತು ಪ್ರಧಾನಿ ಮಾತನಾಡಿದ್ದು, ಸಭೆಯನ್ನು ಭ್ರಷ್ಟ ಪಕ್ಷಗಳ ಒಕ್ಕೂಟ ಎಂದು ಕರೆದಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಗಳನ್ನು ಕೇಂದ್ರೀಕರಿಸಿ ತುಷ್ಟೀಕರಣ, ರಾಜವಂಶ ಆಡಳಿತ ಪ್ರೋತ್ರಾಹಿಸುವ ನಾಯಕರೂ ನಡೆಸುತ್ತಿರುವ ದುಷ್ಟ ಕೂಟ ಎಂದು ಹೇಳಿದ್ದಾರೆ.
ಪೋರ್ಟ್ ಬ್ಲೇರ್ನಲ್ಲಿ ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಮಂಗಳವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಯು ಕೇವಲ ಒಂದು ಗ್ಯಾರಂಟಿಯನ್ನು ನೀಡಬಲ್ಲದು, 20 ಲಕ್ಷ ಕೋಟಿ ರೂಪಾಯಿಗಳ ಹಗರಣಗಳ ಗ್ಯಾರಂಟಿ ಎಂದು ವ್ಯಂಗ್ಯವಾಡಿದರು.
ವಿರೋಧ ಪಕ್ಷಗಳ ಸಭೆಯನ್ನು “ಕಟ್ಟರ್ ಭ್ರಷ್ಟಾಚಾರ ಸಮ್ಮೇಳನ” ಎಂದು ಬಣ್ಣಿಸಿದ ಅವರು, ‘‘ದೇಶದ ಜನ ಹೇಳುತ್ತಿದ್ದಾರೆ. ಇದು ‘ಕಟ್ಟರ್ ಭ್ರಷ್ಟಾಚಾರ ಸಮ್ಮೇಳನ’. ಈ ಸಭೆಯ ಇನ್ನೊಂದು ವಿಶೇಷತೆ ಎಂದರೆ, ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದಲ್ಲಿ ಜಾಮೀನಿನ ಮೇಲೆ ಹೊರಗಿರುವವರು ಸಭೆ ನಡೆಸುತ್ತಿದ್ದಾರೆ. ಅವರನ್ನು ಅವರ ದುಷ್ಟಕೂಟ ಸದಸ್ಯರು ಮಹಾಮಹಿಮರೆಂದು ಬಣ್ಣಿಸುತ್ತಾರೆ ಎಂದು ಟೀಕಿಸಿದರು.
ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ತಮಿಳುನಾಡು ಸರ್ಕಾರಗಳ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನಿ, ಈ ರಾಜ್ಯಗಳಲ್ಲಿ ಮದ್ಯ ಹಗರಣ ಮತ್ತು ಕಾಗದ ಸೋರಿಕೆಯಂತಹ ಹಲವಾರು ಅಕ್ರಮವನ್ನು ಮುಚ್ಚಿಹಾಕಲಾಗಿದೆ. ಇಡಿ ಸಂಸ್ಥೆ ತನಿಖೆ ನಡೆಸಿದರೆ ಭ್ರಷ್ಟಕೂಟ ಒಗ್ಗೂಡಿ ದಾಳಿ ನಡೆಸುತ್ತವೆ ಎಂದರು.