ನವದೆಹಲಿ: ಭಾರತದ ಜೊತೆಗಿನ ಸ್ನೇಹವನ್ನು ಗಟ್ಟಿಗೊಳಿಸುವ ದೇಶಗಳಿಗೆ ಆರ್ಥಿಕ ಲಾಭವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಜಿ20 ಶೃಂಗ ಸಭೆ ನಿಮಿತ್ತ ಇಲ್ಲಿ ನಡೆದ ಬಿ20 ಸಭೆಯ ಸಮಾರೋಪದಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ‘ನೀವು ಭಾರತದ ಜೊತೆಗೆ ಗಟ್ಟಿ ಸ್ನೇಹ ಹೊಂದಿದಷ್ಟೂ ನಿಮ್ಮ ಆರ್ಥಿಕತೆ ಉಜ್ವಲಗೊಳ್ಳುತ್ತದೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಸಂಕಷ್ಟಗೊಂಡ ದೇಶಗಳ ಜೊತೆ ಭಾರತ ಪರಸ್ಪರ ವಿಶ್ವಾಸ ಬೆಳೆಸುತ್ತಿದೆ’ ಎಂದು ಹೇಳಿದ್ದಾರೆ.
‘ನಮ್ಮ ಸರ್ಕಾರದ ಬಡವರ ಪರ ನೀತಿಗಳಿಂದಾಗಿ ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ಅತಿದೊಡ್ಡ ಮಧ್ಯಮವರ್ಗ ಸೃಷ್ಟಿಯಾಗಲಿದೆ. ಕ್ರಿಪ್ಟೋಕರೆನ್ಸಿ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನಂತಹ ವಿಚಾರದಲ್ಲಿ ಉದ್ಯಮ ಮುಖಂಡರುಗಳು ಅವಲೋಕನ ನಡೆಸಬೇಕು. ಕ್ರಿಪ್ಟೋಕರೆನ್ಸಿಗೆ ಜಾಗತಿಕ ಚೌಕಟ್ಟು ರೂಪಿಸುವ ಅವಶ್ಯಕತೆ ಇದೆ. ಬೇರೆ ದೇಶಗಳನ್ನು ಒಂದು ಮಾರುಕಟ್ಟೆಯಂತೆ ನೋಡುವುದರಿಂದ ಏನೂ ಪ್ರಯೋಜನ ಇಲ್ಲ. ಎಲ್ಲರನ್ನೂ ಸಹಭಾಗಿಗಳನ್ನಾಗಿಸಿಕೊಂಡರೆ ಪ್ರಗತಿ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿ20 ಸಮಿಟ್ನಲ್ಲಿ ಹೇಳಿದ್ದಾರೆ.