ನವದೆಹಲಿ: ಲಡಾಖ್ನಲ್ಲಿ ಸೇನಾ ಟ್ರಕ್ ನದಿಗೆ ಬಿದ್ದು ಸೈನಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂತಾಪ ಸೂಚಿಸಿದ್ದು, ಸೈನಿಕರ ಸೇವೆ ಸದಾ ಸ್ಮರಣೀಯ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್ (ಹಿಂದೆ ಟ್ವಿಟರ್) ಪೋಸ್ಟ್ನಲ್ಲಿ ಹೀಗೆ ಹೇಳಿದೆ: “ಲೇಹ್ ಬಳಿ ಸಂಭವಿಸಿದ ದುರ್ಘಟನೆಯಿಂದ ನಾವು ಭಾರತೀಯ ಸೇನೆಯ ವೀರ ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ. ದೇಶ ಅವರ ಸೇವೆಯನ್ನು ಯಾವಾಗಲೂ ಸ್ಮರಿಸುತ್ತದೆ. ಗಾಯಾಳುಗಳು ಆದಷ್ಟು ಶೀಘ್ರ ಚೇತರಿಸಿಕೊಳ್ಳಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವಿಟರ್ನಲ್ಲಿ ಸೈನಿಕರ ಸಾವಿಗೆ ಕಂಬನಿ ಮಿಡಿದಿದ್ದು, ರಸ್ತೆ ಅಪಘಾತದಿಂದ ನಾವು ನಮ್ಮ ವೀರ ಸೈನಿಕರನ್ನು ಕಳೆದುಕೊಂಡಿದ್ದೇವೆ, ಈ ದುಃಖದ ಸಮಯದಲ್ಲಿ ದುಃಖತಪ್ತ ಕುಟುಂಬಗಳೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ.
ಲೇಹ್ನಲ್ಲಿ ಸೇನಾ ಟ್ರಕ್ ಅಪಘಾತದಲ್ಲಿ 9 ಯೋಧರು ಹುತಾತ್ಮರಾದ ಸುದ್ದಿ ತುಂಬಾ ದುಃಖ ತಂದಿದೆ. ನಮ್ಮ ವೀರ ಯೋಧರಿಗೆ ನಾವು ಸದಾ ಋಣಿಯಾಗಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಗಾಯಗೊಂಡ ಸೈನಿಕರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ಈ ದುಃಖದ ಸಮಯದಲ್ಲಿ ಇಡೀ ದೇಶವೇ ನಿಮ್ಮೊಂದಿಗಿದೆ ಎಂದು ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ದುರಂತ ಘಟನೆಗೆ ಸಂತಾಪ ಸೂಚಿಸಿದ್ದಾರೆ. “ಲಡಾಖ್ನಲ್ಲಿ ಸಂಭವಿಸಿದ ಅಪಘಾತದಿಂದ ನಮ್ಮ ಅನೇಕ ಸೈನಿಕರು ಹುತಾತ್ಮರಾದ ಸುದ್ದಿ ತುಂಬಾ ದುಃಖಕರವಾಗಿದೆ. ಎಲ್ಲಾ ಹುತಾತ್ಮರಿಗೆ ನಾನು ನಮ್ರ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ.