ಹೊಸದಿಲ್ಲಿ: ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ಡಿಸೆಂಬರ್ 31ರವರೆಗೆ ಶೇ.40 ರಫ್ತು ಸುಂಕ ವಿಧಿಸಿದೆ. ಈ ಕುರಿತು ಶನಿವಾರ ಅಧಿಸೂಚನೆ ಹೊರಡಿಸಲಾಗಿದೆ.
ಕಳೆದ ಕೆಲವು ವಾರಗಳಿಂದ ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೊ ಸೇರಿದಂತೆ ಹಲವು ತರಕಾರಿಗಳ ಬೆಲೆ ಗಗನಕ್ಕೇರಿದೆ. ಈ ನಿಟ್ಟಿನಲ್ಲಿ ಈರುಳ್ಳಿ ದರ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
ಟೊಮೆಟೊ ಬೆಲೆ ನಿಯಂತ್ರಿಸುವ ಉದ್ದೇಶದಿಂದ ಆಗಸ್ಟ್ 20 ರಿಂದ ಟೊಮೆಟೊವನ್ನು ಕೆಜಿಗೆ 40 ರೂ.ಗಳಂತೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ.
ಆಗಸ್ಟ್ 20 ರಿಂದ ಕೆಜಿಗೆ 40 ರೂ ನಲ್ಲಿ ಟೊಮ್ಯಾಟೊ ಮಾರಾಟ ಮಾಡುವಂತೆ ಗ್ರಾಹಕ ವ್ಯವಹಾರಗಳ ಇಲಾಖೆ NAFED ಮತ್ತು NCCF ಗೆ ನಿರ್ದೇಶನ ನೀಡಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯ ಶುಕ್ರವಾರ ಈ ನಿರ್ಧಾರವನ್ನು ಪ್ರಕಟಿಸಿದ್ದು, ಜುಲೈ 14 ರಿಂದ ಇಲ್ಲಿಯವರೆಗೆ 15 ಲಕ್ಷ ಕೆಜಿಗೂ ಹೆಚ್ಚು ಟೊಮ್ಯಾಟೊವನ್ನು NAFED ಮತ್ತು NCCF ಖರೀದಿಸಿದೆ ಎಂದು ಹೇಳಿದೆ.
ಕಳೆದ ಒಂದು ತಿಂಗಳಲ್ಲಿ ದೆಹಲಿ-ಎನ್ಸಿಆರ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ಸ್ಥಳಗಳಲ್ಲಿ ಎರಡು ಏಜೆನ್ಸಿಗಳು ದೇಶಾದ್ಯಂತ ಸಬ್ಸಿಡಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡಿದೆ.