ನವದೆಹಲಿ: ಪಶ್ಚಿಮ ಘಟ್ಟಗಳ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದಲ್ಲಿ ಅರಣ್ಯ ಅಧಿಕಾರಿಗಳಿಗೆ ಬೆದರಿಕೆ ಮತ್ತು ರಸ್ತೆ ನಿರ್ಮಾಣ ಚಟುವಟಿಕೆಯನ್ನು ಕೈಗೆತ್ತಿಕೊಂಡಿದ್ದ ಬಿಜೆಪಿ ಶಾಸಕರಾದ ಕೆ ಜಿ ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಎಸ್ ಜಿ ಮೇದಪ್ಪ ವಿರುದ್ದ ಸೂಕ್ತ ಕ್ರಮಕೈಗಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಆದೇಶಿಸಿದೆ.
ಸುಮಾರು 12 ವರ್ಷಗಳ ಹಿಂದಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ರಚಿಸಿದ್ದ ಉನ್ನತಾಧಿಕಾರದ ಸಮಿತಿಯ ವರದಿಯ ಆಧಾರದಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ. ದಿನಾಂಕ 10.12.2008 ರಂದು ಮಡಿಕೇರಿಯಲ್ಲಿ ನಡೆದ ಜಿಲ್ಲಾ ಜಾಗೃತ ಮತ್ತು ಮೇಲ್ವಿಚಾರಣಾ ಸಮಿತಿ ಹಾಗೂ ಕೆಡಿಪಿ ಸಭೆಯಲ್ಲಿ ಪುಷ್ಪಗಿರಿ ಅಭಯಾರಣ್ಯದ ಕಡಮಕಲ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಯಾತ್ರಾ ಕೇಂದ್ರ ಕುಕ್ಕೆ ಸುಬ್ರಮಣ್ಯ ಕ್ಕೆ ರಸ್ತೆ ನಿರ್ಮಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಈ ರಸ್ತೆಯು ಬಹಳ ಹತ್ತಿರದ ರಸ್ತೆ ಆಗಿದ್ದು ಸುಮಾರು 35 ಕಿಲೋಮೀಟರ್ ಅಂತರವಿದ್ದರೆ ಹಾಲಿ ಇರುವ ಮಂಗಳೂರು ಹೆದ್ದಾರಿ ಮೂಲಕ ಹೋಗುವುದಾದರೆ 70 ಕಿಲೋಮೀಟರ್ ಪ್ರಯಾಣಿಸಬೇಕಿದೆ.
ಇದೇ ಹಿನ್ನೆಲೆಯಲ್ಲಿ ವೀರಾಜಪೇಟೆ ಶಾಸಕ ಕೆ ಜಿ ಬೋಪಯ್ಯ, ಮಡಿಕೇರಿ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಮತ್ತು ಅಂದಿನ ವಿಧಾನ ಪರಿಷತ್ ಸದಸ್ಯ ಎಸ್ ಜಿ ಮೇದಪ್ಪ ಅವರು ಗ್ರಾಮಸ್ಥರ ಬೆಂಬಲದೊಂದಿಗೆ 28-12-2008 ರಂದು ಅಭಯಾರಣ್ಯ ಪ್ರವೇಶಿಸಿ ರಸ್ತೆ ನಿರ್ಮಾಣ ಮಾಡಿದ್ದರು.
ಅಂದಿನ ಅರಣ್ಯಾಧಿಕಾರಿಗಳು ಈ ಕುರಿತು ಪೋಲೀಸ್ ದೂರು ನೀಡಿದ್ದು, ಜಿಲ್ಲಾ ಪೋಲೀಸ್ ಅಧಿಕಾರಿ ಸ್ಥಳದಲ್ಲಿದ್ದರೂ ರಸ್ತೆ ನಿರ್ಮಾಣ ತಡೆಯಲು ಸಾದ್ಯವಾಗಿರಲಿಲ್ಲ. ಈ ಕುರಿತು ನಿವೃತ್ತ ಏರ್ ವೈಸ್ ಮಾರ್ಷಲ್ ನಂದಾ ಕಾರ್ಯಪ್ಪ ಅವರು ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದರು . ಈ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟು ಉನ್ನತಾಧಿಕಾರದ ಸಮಿತಿ ರಚಿಸಿತ್ತು.
ಸಮಿತಿಯು 2012 ರಲ್ಲಿ ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಿ ಅಭಯಾರಣ್ಯದಲ್ಲಿ ರಸ್ತೆ ನಿರ್ಮಿಸಿರುವುದು ಹಾಲಿ ಎಲ್ಲಾ ಕಾನೂನುಗಳ ಸ್ಪಷ್ಟ ಉಲ್ಲಂಘನೆ ಎಂದು ತಿಳಿಸಿತ್ತು. ರಸ್ತೆ ನಿರ್ಮಾಣಕ್ಕೆ ಪಟ್ಟು ಹಿಡಿದು ಉದ್ರಿಕ್ತರಾಗಿದ್ದ ಗ್ರಾಮಸ್ಥರನ್ನು ಸಮಾಧಾನಪಡಿಸಲು ತಾವು ಸ್ಥಕ್ಕೆ ತೆರಳಿದ್ದಾಗಿ ಶಾಸಕರುಗಳು ತಿಳಿಸಿದ್ದರು. ಅದರೆ ಸಮಿತಿಯು ಈ ಉತ್ತರವನ್ನು ತಿರಸ್ಕರಿಸಿದ್ದು, ಅಭಯಾರಣ್ಯದಲ್ಲಿ ಯಾವುದೇ ರೀತಿಯ ಚಟುವಟಿಕೆ ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ.
ಶಾಕಸಕರುಗಳು ಅರಣ್ಯಾಧಿಕಾರಿಗಳಿಗೆ ಬೆದರಿಕೆ ಹಾಕಿರುವುದನ್ನು ಸಮಿತಿಯು ಗಮನಿಸಿದ್ದು ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಅಂದಿನ ಕೊಡಗು ಜಿಲ್ಲಾಧಿಕಾರಿ ಗಳಾಗಿದ್ದ ಬಲದೇವ್ ಕೃಷ್ಣ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸುದರ್ಶನ್ ಅವರು ಅರಣ್ಯ ಕಾಯ್ದೆಯ ಉಲ್ಲಂಘನೆ ತಡೆಯಲು ಕ್ರಮ ಕೈಗೊಂಡಿಲ್ಲ ಎಂದು ಸಮಿತಿ ಹೇಳಿದೆ.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ಅವರ ಅದ್ಯಕ್ಷತೆಯ ಹಸಿರು ಪೀಠವು ಕಳೆದ ಡಿಸೆಂಬರ್ 13 ರಂದು ಆದೇಶವನ್ನು ಹೊರಡಿಸಿದ್ದು , ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪರಿಸರ ಸಚಿವಾಲಯದ ಪ್ರಾದೇಶಿಕ ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮಿತಿಯು ಈ ಪ್ರಕರಣವನ್ನು ಮುಕ್ತಾಯಗೊಳಿಸಬಹುದು ಎಂದು ಆದೇಶಿಸಿದೆ.
ಈ ವಿಷಯದಲ್ಲಿ ಕ್ರಮವನ್ನು ಅಂತಿಮಗೊಳಿಸಲು ಹಸಿರು ಪೀಠವು ಮೂರು ತಿಂಗಳ ಗಡುವನ್ನು ನಿಗದಿಪಡಿಸಿದೆ, ಅಲ್ಲದೆ ಸಮಿತಿಯ ತೀರ್ಮಾನವನ್ನು ಜಾರಿಗೊಳಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಜವಾಬ್ದಾರಿಯನ್ನಾಗಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಏ ಟಿ ಪೂವಯ್ಯ ಅವರು ಅರಣ್ಯದೊಳಗೆ ಚಟುವಟಿಕೆ ಕೈಗೊಳ್ಳಲು ರಾಜ್ಯ ಅರಣ್ಯ ಇಲಾಖೆಯ ಉನ್ನತ ಮಟ್ಟದ ಸಮಿತಿಯ ಅನುಮತಿಯ ಜತೆಗೇ ಕೇಂದ್ರ ಅರಣ್ಯ ಇಲಾಖೆಯ ಉನ್ನತ ಮಟ್ಟದ ಸಮಿತಿಯ ಅನುಮತಿ ಮತ್ತು ಹಸಿರು ಪೀಠದ ಅನುಮತಿ ಅತ್ಯಗತ್ಯ ಎಂದು ಹೇಳಿದರು.