ಪುತ್ತೂರು: ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಂಡೂರಿನ ಕಂಪ ಎಂಬಲ್ಲಿ ಯುವತಿಯೊರ್ವಳನ್ನು ಮನೆಯೊಳಗಡೆ ನುಗ್ಗಿ ಚೂರಿ ಇರಿದು ಕೊಲೆಗೈದ ಭೀಭತ್ಸ ಪ್ರಕರಣ ಮಂಗಳವಾರ ಬೆಳಿಗ್ಗೆ 11.30ಕ್ಕೆ ನಡೆದಿದೆ.
ಯುವತಿಯ ಮಾಜಿ ಪ್ರಿಯಕರನೇ ಕೊಲೆ ಮಾಡಿರುವ ಸಂಶಯ ವ್ಯಕ್ತಪಡಿಸಿ ಯುವತಿಯ ತಾಯಿ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಾಗಿದೆ. ಕನಕಮಜಲಿನ ಉಮೇಶ ಆಕೆಯನ್ನು ಪ್ರೀತಿಸುತ್ತಿದ್ದಾಗಿ ತಿಳಿಸಿದ್ದು ಈತನೇ ಈ ಕೃತ್ಯ ಎಸಗಿರುವ ಅನುಮಾನ ದಟ್ಟವಾಗಿದೆ.
ಮುಂಡೂರು ಕಂಪದ ತನ್ನ ಮನೆಯಲ್ಲಿ ಜಯಶ್ರೀಯೊಬ್ಬಳೇ ಇದ್ದ ವೇಳೆ ದುಷ್ಕರ್ಮಿಯೊರ್ವ ಮನೆಗೆ ನುಗ್ಗಿ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಆಸ್ಪತಗೆ ಸಾಗಿಸುವ ವೇಳೆ ದಾರಿ ಮಧ್ಯೆ ಆಕೆ ಮೃತಪಟ್ಟಿದ್ದಳು ಎಂದು ಹೇಳಲಾಗಿದೆ.
ಜಯಶ್ರೀಯನ್ನು ಕನಕಮಜಲಿನ ಉಮೇಶ ಎಂಬಾತ ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದು, ಆತನು ಆಗ್ಗಾಗ್ಗೆ ಯುವತಿಯ ಮನೆಗೆ ಬರುತ್ತಿದ್ದ. ಆತನ ಗುಣ ನಡತೆಯಿಂದ ಅಸಮಾಧನಗೊಂಡಿದ್ದ ಜಯಶ್ರೀಯು ಎರಡು ತಿಂಗಳ ಹಿಂದೆ ( ಕಳೆದ ನವೆಂಬರ್ ತಿಂಗಳಿನಲ್ಲಿ ) ದೂರ ಮಾಡಿದ್ದಳು. ಇದರಿಂದ ಉಮೇಶ ಅಸಮಾಧನಗೊಂಡಿದ್ದ ಎನ್ನಲಾಗಿದೆ.
23ರ ಹರೆಯದ ಜಯಶ್ರೀ ಮುಂಡೂರು ಗ್ರಾಮದ ಕಂಪ ಮನೆ ನಿವಾಸಿ ದಿ. ಗುರುವ ಹಾಗೂ ಗಿರಿಜಾ ಎಂಬವರ ಪುತ್ರಿ. ಈಕೆ ಬಿಎಸ್ ಸಿ ಪದವಿಧರೆ. ಜಯಶ್ರೀ ಈ ಮೊದಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲ ಸಮಯದಿಂದ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದಳು ಎಂದು ತಿಳಿದು ಬಂದಿದೆ. ಈಕೆಯ ತಂದೆ ಗುರುವರವರು ಕಳೆದ ವರ್ಷ ಕೊವೀಡ್ ಸೋಂಕಿಗೆ ಬಲಿಯಾಗಿದ್ದರು. ಆ ಬಳಿಕ ಆಕೆ ತಾಯಿ ಹಾಗೂ ತಮ್ಮನ ಜತೆ ವಾಸಿಸುತ್ತಿದ್ದಳು.
ಘಟನೆ ಹಿನ್ನೆಲೆ:
ಮಂಗಳವಾರ ಬೆಳಿಗ್ಗೆ ಮೃತ ಜಯಶ್ರೀ ಅವರ ಸಹೋದರ ಮಂಗಳೂರಿಗೆ ಹೋಗಿದ್ದು, ತಾಯಿ ಗಿರಿಜಾರವರು 11 ಗಂಟೆ ಸುಮಾರಿಗೆ ತೋಟಕ್ಕೆ ತೆರಳಿದ್ದಾರೆ. 11.30 ಗಂಟೆ ಸುಮಾರಿಗೆ ಜಯಶ್ರೀ ಅಮ್ಮಾ ಎಂದು ಕೂಗಿಕೊಂಡು ಗಿರಿಜಾರವರ ಬಳಿಗೆ ತೋಟಕ್ಕೆ ಓಡಿ ಬಂದಿರುತ್ತಾರೆ.ಆಗ ಅವರ ಹೊಟ್ಟೆಯಲ್ಲಿ ಗಾಯವಾಗಿ ರಕ್ತ ಸ್ರಾವ ಆಗುತ್ತಿರುವುದು ಕಂಡು ಬಂದಿದೆ. ತಕ್ಷಣ ಗಿರಿಜಾರವರು ಆಟೋ ರಿಕ್ಷಾದಲ್ಲಿ ಜಯಶ್ರೀಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಮಂಗಳವಾರ ಬೆಳಿಗ್ಗೆ 11 .30 ರ ಸುಮಾರಿಗೆ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದ ವ್ಯಕ್ತಿ ಮನೆಯೊಳಗಿದ್ದ ಜಯಶ್ರೀಯನ್ನು ಯಾವುದೋ ಆಯುಧದಿಂದ ತಿವಿದು ಕೊಲೆ ಮಾಡಿದ್ದು, ಈ ಕೃತ್ಯವನ್ನು ಉಮೇಶನೇ ಮಾಡಿರುವ ಸಂಶಯವಿರುವುದಾಗಿ ತಾಯಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.