ನವದೆಹಲಿ: ಕೆಲ ಸಮಯದ ಹಿಂದೆ ಈರುಳ್ಳಿ ಬೆಲೆ ಗಗನಕ್ಕೇರಿ ಗ್ರಾಹಕರಲ್ಲಿ ಕಣ್ಣೀರು ತರಿಸಿತ್ತು. ಅದೇ ರೀತಿ ಇದೀಗ ನಿರಂತರ ಮಳೆಯಿಂದಾಗಿ ಸರಬರಾಜಿಗೆ ಅಡ್ಡಿಯುಂಟಾದ ಕಾರಣ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಕೆಜಿ ಗೆ 200 ರೂ. ತಲುಪಿದೆ. ಟೊಮೆಟೊ ಮಾತ್ರವಲ್ಲದೇ ಇತರ ತರಕಾರಿಗಳ ದರ ಕೂಡಾ ದುಬಾರಿಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಟೊಮೊಟೊ ಉತ್ಪಾದಿಸುವ ಪ್ರದೇಶ ಭಾರಿ ಮಳೆಯಿಂದ ಜಲಾವೃತಗೊಂಡು ಬೆಳೆ ಹಾನಿಯಾಗಿದೆ. ಅಲ್ಲದೆ ಮಣ್ಣಿನ ಕೆಳಗೆ ಬೆಳೆಯುವ ಈರುಳ್ಳಿ ಮತ್ತು ಶುಂಠಿಯಂತಹ ತರಕಾರಿ ಕೂಡಾ ನಾಶವಾಗಿರುವುದಾಗಿ ಅವರು ಹೇಳಿದ್ದಾರೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಸೋಮವಾರದಂದು ದೇಶಾದ್ಯಂತ ಟೊಮೊಟೊ ಸರಾಸರಿ ಬೆಲೆ ಕೆಜಿಗೆ 104.38 ರಷ್ಟಿತ್ತು. ಸ್ವೈ ಮಾಧೋಪುರದಲ್ಲಿ ಗರಿಷ್ಠ ಕೆಜಿಗೆ ರೂ. 200 ಇದ್ದರೆ, ರಾಜಸ್ಥಾನದ ಚುರುನಲ್ಲಿ ಕೆಜಿಗೆ 31 ರೂ. ಇತ್ತು. ಇನ್ನೂ ಮಹಾನಗರಗಳ ಪೈಕಿ ಕೋಲ್ಕತ್ತಾದಲ್ಲಿ ಕೆಜಿಗೆ 149 ರೂ. ಮುಂಬೈನಲ್ಲಿ 135, ಚೆನ್ನೈನಲ್ಲಿ ರೂ. 123 ಮತ್ತು ದೆಹಲಿಯಲ್ಲಿ ರೂ. 100 ಇತ್ತೆಂದು ಅಂಕಿಅಂಶಗಳಿಂದ ತಿಳಿದು ಬಂದಿದೆ.