ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದಿಯೋಘರ್ ಮತ್ತು ಪಾಟ್ನಾಕ್ಕೆ ಭೇಟಿ ನೀಡಿ 16,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಅವರು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಬಾಬಾ ಬೈದ್ಯನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 6 ಗಂಟೆಗೆ ಪಾಟ್ನಾದಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆಯ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.
ಬಾಬಾ ಬೈದ್ಯನಾಥ ಧಾಮ್ ಗೆ ನೇರ ಸಂಪರ್ಕ ಒದಗಿಸುವ ಪ್ರಮುಖ ಹೆಜ್ಜೆಯಾಗಿ, ಸುಮಾರು 400 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ದಿಯೋಘರ್ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು ವಾರ್ಷಿಕವಾಗಿ ಐದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಲು ಸಜ್ಜುಗೊಂಡಿದೆ.
ತಮ್ಮ ಭೇಟಿಯ ವೇಳೆ ಪ್ರಧಾನಮಂತ್ರಿಯವರು ದಿಯೋಘರ್ ನ ಏಮ್ಸ್ ನಲ್ಲಿ ಒಳರೋಗಿ ವಿಭಾಗ (ಐಪಿಡಿ) ಮತ್ತು ಆಪರೇಶನ್ ಥಿಯೇಟರ್ ಸೇವೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವ ನಿರೀಕ್ಷೆಯಿದೆ.
ದೇಶಾದ್ಯಂತ ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಂತಹ ಎಲ್ಲಾ ಸ್ಥಳಗಳಲ್ಲಿ ಪ್ರವಾಸಿಗರಿಗೆ ಸೌಲಭ್ಯಗಳನ್ನು ಸುಧಾರಿಸುವ ಪ್ರಧಾನಮಂತ್ರಿಯವರ ಬದ್ಧತೆಗೆ ಮತ್ತಷ್ಟು ಉತ್ತೇಜನ ದೊರೆಯಲಿದ್ದು, ಪ್ರವಾಸೋದ್ಯಮ ಸಚಿವಾಲಯದ ಪ್ರಸಾದ ಯೋಜನೆಯಡಿ ಮಂಜೂರಾದ “ಬೈದ್ಯನಾಥ ಧಾಮ್, ದಿಯೋಘರ್ ಅಭಿವೃದ್ಧಿ” ಯೋಜನೆಯ ಘಟಕಗಳು ಉದ್ಘಾಟನೆಗೊಳ್ಳಲಿವೆ. ಉದ್ಘಾಟನೆಗೊಳ್ಳುತ್ತಿರುವ ಯೋಜನೆಗಳಲ್ಲಿ ತಲಾ 2000 ಯಾತ್ರಾರ್ಥಿಗಳ ಸಾಮರ್ಥ್ಯದ ಎರಡು ದೊಡ್ಡ ಯಾತ್ರಾ ಸಭಾಗೃಹಗಳ ಅಭಿವೃದ್ಧಿಯೂ ಸೇರಿದೆ. ಜಲಸರ್ ಕೆರೆ ಮುಂಭಾಗ ಅಭಿವೃದ್ಧಿ; ಶಿವಗಂಗಾ ಕೆರೆ ಅಭಿವೃದ್ಧಿ ಸೇರಿದೆ.
ಅಲ್ಲದೆ, ಅವರು ರಾಷ್ಟ್ರೀಯ ಹೆದ್ದಾರಿ 2 ರ ಗೋರ್ಹಾರ್ ನಿಂದ ಬರ್ವಾಡಾ ವಿಭಾಗದ ಆರು ಪಥಗಳ ರಸ್ತೆಯನ್ನು ಉದ್ಘಾಟಿಸಲಿದ್ದಾರೆ; ರಾಷ್ಟ್ರೀಯ ಹೆದ್ದಾರಿ-32ರ ಪಶ್ಚಿಮ ಬಂಗಾಳದ ಗಡಿ ಭಾಗದವರೆಗೆ ರಾಜ್ ಗಂಜ್-ಚಾಸ್ ಅಗಲೀಕರಣ. ರಾಷ್ಟ್ರೀಯ ಹೆದ್ದಾರಿ-80ರ ಮಿರ್ಜಾಚೌಕಿ-ಫರಕ್ಕಾ ವಿಭಾಗದ ಚತುಷ್ಪಥ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವ ಪ್ರಮುಖ ಯೋಜನೆಗಳು ಸೇರಿವೆ. ಹರಿಹರಗಂಜ್ನಿಂದ ಪರ್ವಾ ಮೋರೆವರೆಗಿನ ರಾಷ್ಟ್ರೀಯ ಹೆದ್ದಾರಿ 98ರ ಚತುಷ್ಪಥ ಮಾರ್ಗ; ರಾಷ್ಟ್ರೀಯ ಹೆದ್ದಾರಿ-23ರ ಪಾಲ್ಮಾದಿಂದ ಗುಮ್ಲಾ ವಿಭಾಗದ ಚತುಷ್ಪಥ ಮಾರ್ಗ; ರಾಷ್ಟ್ರೀಯ ಹೆದ್ದಾರಿ-75ರ ಕುಚೇರಿ ಚೌಕ್ ನಿಂದ ಪಿಸ್ಕಾ ಮೋರ್ ವಿಭಾಗದವರೆಗೆ ಎಲಿವೇಟೆಡ್ ಕಾರಿಡಾರ್.
ಪ್ರಧಾನಮಂತ್ರಿಯವರು ಈ ಪ್ರದೇಶಕ್ಕೆ ಸುಮಾರು 3000 ಕೋಟಿ ರೂ.ಗಳ ವಿವಿಧ ಇಂಧನ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುವರು ಮತ್ತು ಎರಡು ರೈಲ್ವೆ ಯೋಜನೆಗಳಾದ ಗೊಡ್ಡಾ-ಹನ್ಸ್ದಿಹಾ ವಿದ್ಯುದ್ದೀಕರಣ ವಿಭಾಗ ಮತ್ತು ಗರ್ವಾ-ಮಹುರಿಯಾ ಡಬ್ಲಿಂಗ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ನಂತರ ಸಂಜೆ ಪ್ರಧಾನಿ ಮೋದಿ ಅವರು ಬಿಹಾರ ವಿಧಾನಸಭೆಯ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಬಿಹಾರ ವಿಧಾನಸಭೆಯ 100 ವರ್ಷಗಳ ನೆನಪಿಗಾಗಿ ನಿರ್ಮಿಸಲಾದ ಶತಾಬ್ದಿ ಸ್ಮೃತಿ ಸ್ತಂಭವನ್ನು ಉದ್ಘಾಟಿಸಲಿದ್ದಾರೆ. ಅವರು ವಿಧಾನಸೌಧ ವಸ್ತುಸಂಗ್ರಹಾಲಯಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.