ನವದೆಹಲಿ: ದೇಶದಲ್ಲಿ ವೈಜ್ಞಾನಿಕ ಸಂಶೋಧನೆಗಳ ಪ್ರಗತಿಗೆ ಬಿಜೆಪಿ ನೇತೃತ್ವದ ಕೇಂದ್ರ ಅನುದಾನ ಒದಗಿಸದೇ ಅಡ್ಡಿಪಡಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಖರ್ಗೆ, “ದೇಶದಲ್ಲಿ ವೈಜ್ಞಾನಿಕ ಸಂಶೋಧನೆ ಕ್ಷೇತ್ರವನ್ನು ಮಣ್ಣುಪಾಲು ಮಾಡಲು ಮೋದಿ ಸರ್ಕಾರ ಯತ್ನಿಸುತ್ತಿದೆ. ಇದರಿಂದ ದೇಶದ ಪ್ರಗತಿ ಅಧೋಗತಿಯತ್ತ ಸಾಗಿದೆ. ಉನ್ನತ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳಿಗೆ ಈವರ್ಷ ಅನುದಾನವನ್ನೇ ಒದಗಿಸಿಲ್ಲ ಎಂದು ಹೇಳಿದ್ದಾರೆ. ವಿಜ್ಞಾನಿಗಳು ಅನುದಾನ ನೀಡುವಂತೆ ಕೇಳಿದರೆ ಸ್ವಂತ ಹಣ ಖರ್ಚು ಮಾಡುವಂತೆ ಸೂಚಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.
ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನಕ್ಕೆ ಹೆಚ್ಚಿನ ಅನುದಾನ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ ಅವರ ಸಂಶೋಧನೆಗೆ ಅಗತ್ಯವಾದ ಖರೀದಿಗೆ ತಡೆಯೊಡ್ಡಲಾಗಿದೆ. ಅಲ್ಲದೆ ಸಿಬ್ಬಂದಿಗೆ ಮೂರು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ‘ಜೈ ವಿಜ್ಞಾನ್, ಜೈ ಅನ್ಸುಂಧನ್’ ಬಗ್ಗೆ ಮಾತನಾಡುತ್ತಾರೆ. ಆದರೆ ದುಃಖಕರ ವಿಚಾರವೆಂದರೆ ಸರ್ಕಾರವು ‘ಪರಾಜಯ್ ವಿಜ್ಞಾನ, ಪರಜಯ್ ಅನ್ಸುಂಧಾನ್’ ಬಯಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ವಿಜ್ಞಾನಿಗಳಿಗೆ ಈ ವರ್ಷದ ಸಂಶೋಧನಾ ನಿಧಿ ದೊರೆಯದಿರುವ ವರದಿಗಳನ್ನು ಖರ್ಗೆ ಪ್ರಸ್ತಾಪಿಸಿದ್ದಾರೆ.