ದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭಾ ಸದಸ್ಯತ್ವದಿಂದ ಕೊನೆಗೂ ಉಚ್ಛಾಟನೆ ಮಾಡಲಾಗಿದೆ. ಲೋಕಸಭಾ ಎಥಿಕ್ಸ್ ಸಮಿತಿ ಶಿಫಾರಸ್ಸು ಸ್ವೀಕರಿಸಿದ ಸ್ಪೀಕರ್ ಓಂ ಬಿರ್ಲಾ ಅವರು, ಮಹುವಾ ಮೊಯಿತ್ರಾ ಸದಸ್ಯತ್ವವನ್ನು ರದ್ದು ಮಾಡಿದರು. ಲೋಕಸಭೆಯಲ್ಲಿ ಮಹುವಾ ಮೊಯಿತ್ರಾ ಅವರು ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರಮಣಕಾರಿ ಭಾಷಣ ಮಾಡುತ್ತಿದ್ದರು. ಕಾಸಿಗಾಗಿ ಪ್ರಶ್ನೆ ಕೇಳಿದ ಆರೋಪದಲ್ಲಿ ಮಹುವಾ ಮೊಯಿತ್ರಾ ಅವರ ವಿಚಾರಣೆ ನಡೆದಿತ್ತು. ಲೋಕಸಭೆಯಲ್ಲಿ ಇಂದು ಮಹುವಾ ಮೊಯಿತ್ರಾ ಅವರ ಸದಸ್ಯತ್ವ ರದ್ದು ನಿರ್ಣಯ ಬಹುಮತದಿಂದ ಅಂಗೀಕಾರಗೊಂಡಿದೆ.
ಸಂಸದ ಸ್ಥಾನ ಕಳೆದುಕೊಂಡ ಮೇಲೆ ಮಹುವಾ ಮೊಯಿತ್ರಾ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಎಥಿಕ್ಸ್ ಕಮಿಟಿಗೆ ಸಂಸದ ಸ್ಥಾನದಿಂದ ತೆಗೆದು ಹಾಕುವ ಅಧಿಕಾರವಿಲ್ಲ. ಇದು ಬಿಜೆಪಿಯ ಅಂತ್ಯದ ಆರಂಭವಾಗಿದೆ. ನನ್ನ ಬಾಯಿ ಮುಚ್ಚಿಸುವ ಮೂಲಕ ಏನು ಮಾಡಲು ಸಾಧ್ಯವಿಲ್ಲ. ನನ್ನ ಬಾಯಿ ಮುಚ್ಚಿಸಿ ಅದಾನಿ ಸಮಸ್ಯೆಯನ್ನು ಮರೆಸಬಹುದು ಎಂದು ಈ ಮೋದಿ ಸರ್ಕಾರ ಭಾವಿಸಿದ್ದರೆ, ನಿಜವಾಗಿ ಸಹ ಅದು ಸಾಧ್ಯವಿಲ್ಲದ ಕೆಲಸ ಎಂದಿದ್ದಾರೆ. ನಿಮ್ಮ ತರಾತುರಿ ನಿರ್ಧಾರ ನಿಮಗೆ ಅದಾನಿ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ. ಒಂಟಿ ಮಹಿಳಾ ಸಂಸದೆಯ ಬಾಯಿ ಮುಚ್ಚಿಸಲು ನೀವು ಎಷ್ಟು ಕಾಲ ಕಿರುಕುಳ ನೀಡುತ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.